ಮೈಸೂರು: ಅದಮ್ಯ ರಂಗಶಾಲೆಯ ಸಹಭಾಗಿತ್ವದಲ್ಲಿ ನಗರದ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ವಿಜಯನಗರದ ಮೊದಲ ಹಂತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣವನ್ನು ಸ್ವಚ್ಛಗೊಳಿಸುವ ಮುಖಾಂತರ ಶ್ರಮದಾನ ಮಾಡಿದರು.
ಸತತ ಸುರಿಯುವ ಮಳೆಯಕಾರಣದಿಂದ ಸಾಹಿತ್ಯ ಭವನದ ಆವರಣದಲ್ಲಿ ಕಳೆಯು ಬೆಳೆದಿತ್ತಲ್ಲದೇ, ಹಲವು ರೀತಿಯ ತ್ಯಾಜ್ಯಗಳು ಚೆಲ್ಲಾಡಿದ್ದವು. ಜಿಲ್ಲಾ ಕಸಾಪ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಅವರ ಮನವಿಯ ಮೇರೆಗೆ ಜೆ.ಎಸ್.ಎಸ್. ಕಾಲೇಜಿನ ಎನ್.ಎಸ್.ಎಸ್. ತಂಡ ಸ್ವಚ್ಛತಾ ಕಾರ್ಯ ಕೈಗೊಂಡಿತು. ದಿನವಿಡೀ ಶ್ರಮದಾನ ಮಾಡಿದ ವಿದ್ಯಾರ್ಥಿಗಳು ಸ್ವಚ್ಛತೆಯ ಕಾರ್ಯದ ಜೊತೆಗೆ, ಸಾರ್ವಜನಿಕರಿಗೆ ನೈರ್ಮಲ್ಯದ ಅರಿವು ಮೂಡಿಸುವ ಜೊತೆಗೆ ತಮ್ಮ ಕನ್ನಡ ಪ್ರೇಮವನ್ನು ಮೆರೆದರು.
ಜೆ.ಎಸ್.ಎಸ್. ಕಾಲೇಜಿನ ರಾಷ್ಟ್ರೀಯ ಸ್ವಯಂಸೇವಾ ಅಧಿಕಾರಿ ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ ಸುಮಾರು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣವನ್ನು ಸ್ವಚ್ಛ ಮಾಡಿ, ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದ ಆಯೋಜಕರು ಮತ್ತು ಭಾಗಿಯಾಗಿದ್ದ ಸಾಹಿತ್ಯ ಪ್ರಿಯರಿಗೂ ಸ್ವಚ್ಛತೆಯ ಅರಿವು ಮೂಡಿಸಿದರು. ಈ ಸ್ವಚ್ಛತೆಯ ಕಾರ್ಯದಲ್ಲಿ ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ಭಾಗಿಯಾಗಿದ್ದರು.