ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ರಣ ಕಣ ರಂಗೇರಿದ್ದು, ಬಜರಂಗದಳ ಸಂಘಟನೆ ನಿಷೇಧ ಮಾಡುವ ವಿಚಾರವನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದಂತೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಸಿಕ್ಕಿರುವ ಈ ಅಸ್ತ್ರವನ್ನು ಮತವಾಗಿ ಪರಿವರ್ತಿಸಲು ಬಿಜೆಪಿ ವರಿಷ್ಠರು ಪ್ಲ್ಯಾನ್ ಮಾಡಿದೆ.
ಬಿಜೆಪಿ ನಾಯಕರ ಪ್ರೊಫೈಲ್ ಫೋಟೋ, ವಾಟ್ಸಾಪ್, ಫೇಸ್ಬುಕ್ ಸ್ಟೇಟಸ್ಗಳಲ್ಲಿ ‘ನಾನೊಬ್ಬ ಭಜರಂಗಿ’ ಘೋಷಣೆ ಮಾಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ವಿಚಾರ ಪ್ರಸ್ತಾಪ ಆಗುತ್ತಿದ್ಧಂತೆ ಬಿಜೆಪಿ ವರಿಷ್ಠರು ತೀವ್ರ ವಾಗ್ದಾಳಿ ಶುರು ಮಾಡಿದರು. ಪ್ರಧಾನಿ ಮೋದಿ ಕೂಡ ಇದೇ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ‘ಕಾಂಗ್ರೆಸ್ ಹಿಂದೆ ಶ್ರೀರಾಮಚಂದ್ರನ ಬಂಧಿಸಿಟ್ಟಿತು. ಈಗ ಹುನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ’ ಎಂದು ವಿಜಯನಗರದಲ್ಲಿ ಆರೋಪ ಕೂಡ ಮಾಡಿದರು.
ಬಿಜೆಪಿ ನಾಯಕರು ಬಜರಂಗದಳ ನಿಷೇಧ ವಿಚಾರ ಹಿಡಿದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೂ, ಕಾಂಗ್ರೆಸ್ ಲೀಡರ್ಸ್ ಮಾತ್ರ ಈ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿಲ್ಲ. ಈ ಮೂಲಕ ಜಾಣನಡೆ ಪ್ರಯೋಗ ಮಾಡುತ್ತಿದೆ ಕೈಪಡೆ. ಬಿಜೆಪಿ ಈ ವಿಚಾರವನ್ನು ವಿವಾದ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪದ ನಡುವೆಯೇ, ಕಾಂಗ್ರೆಸ್ ಒಂದು ದೊಡ್ಡ ಅಸ್ತ್ರವನ್ನು ಬಿಜೆಪಿ ವಿರುದ್ಧ ಸಿದ್ಧಮಾಡಿ ಇಟ್ಟುಕೊಂಡಂತೆ ಕಾಣುತ್ತಿದೆ. ಇದರ ಜೊತೆಗೆ ಬೆಲೆ ಏರಿಕೆ ಮತ್ತು ಸಾಮಾನ್ಯ ಜನರ ಸಂಕಷ್ಟಗಳನ್ನೇ ಚುನಾವಣೆಗೆ ಅಸ್ತ್ರ ಮಾಡಿಕೊಳ್ಳುತ್ತಿದೆ ಕಾಂಗ್ರೆಸ್.
ಬಿಜೆಪಿ ತನ್ನ ವಿರೋಧಿ ಕಾಂಗ್ರೆಸ್ ವಿರುದ್ಧ ಬಜರಂಗದಳ ನಿಷೇಧದ ಅಸ್ತ್ರ ಹಿಡಿದು ಸದ್ದು ಮಾಡಲು ಪ್ರಯತ್ನಿಸಿದರೂ ಚುನಾವಣೆಯಲ್ಲಿ ದಿಢೀರ್ ಅದು ವರ್ಕೌಟ್ ಆಗುವುದು ಕಷ್ಟ. ಏಕೆಂದರೆ ಚುನಾವಣೆಗೆ ಕೇವಲ 8 ದಿನಗಳು ಬಾಕಿ ಇದೆ. ಹೀಗಿದ್ದಾಗ ಕಾಂಗ್ರೆಸ್ ವಿರುದ್ಧ ಇದೇ ಅಸ್ತ್ರ ಹಿಡ್ದು ಆರೋಪ ಮಾಡಿ ಅದನ್ನ ಮತವಾಗಿ ಕನ್ವರ್ಟ್ ಮಾಡೋದು ಕಷ್ಟದ ವಿಚಾರವೇ ಸರಿ. ಆದರೆ ಕರಾವಳಿ ಭಾಗದಲ್ಲಿ ಇದರಿಂದ ಕಾಂಗ್ರೆಸ್ಗೆ ಹಿನ್ನಡೆ ಎದುರಾದರೂ, ಈಗಾಗಲೇ ಅಲ್ಲಿ ಬಿಜೆಪಿಯೇ ಮುಂದಿದೆ.