ಬೆಂಗಳೂರು: ಬಾಲಸೋರ್ನಲ್ಲಿ ಸಂಭವಿಸಿದ್ದ ರೈಲು ದುರಂತಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಇದೀಗ ಬಿಜೆಪಿ ನಾಲ್ವರು ಸಂಸದರು ಪತ್ರ ಬರೆದಿದ್ದು, ತಿರುಗೇಟು ನೀಡಿದ್ದಾರೆ.
ಸಂಸದರಾದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಸದಾನಂದ ಗೌಡ ಹಾಗೂ ಎಸ್ ಮುನಿಸ್ವಾಮಿ ಪತ್ರ ಬರೆದಿದ್ದಾರೆ. ಖರ್ಗೆ ಅವರು ಮಾಡಿರುವ ಆರೋಪಗಳು ಮತ್ತು ಪತ್ರದಲ್ಲಿ ಉಲ್ಲೇಖಿಸಿದ್ದ ಪ್ರತಿಯೊಂದು ವಿಚಾರಗಳಿಗೂ ಬಿಜೆಪಿ ಸಂಸದರು ಆಧಾರ ಸಹಿತ ಉತ್ತರ ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೀವು ಇತ್ತೀಚೆಗೆ ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಕೆಲವೊಂದು ವಿಚಾರಗಳನ್ನು ನಾವು ಹೇಳಲೇಬೇಕಿದೆ. ನಾವು ನಿಮ್ಮ ಪತ್ರದಲ್ಲಿ ವಾಕ್ಚಾತುರ್ಯ ಹೆಚ್ಚು ಮತ್ತು ಕಡಿಮೆ ವಾಸ್ತವ ಇರುವುದನ್ನು ಕಂಡುಕೊಂಡಿದ್ದೇವೆ. ನಿಮ್ಮ ಪತ್ರವು ವಾಸ್ತವಕ್ಕೆ ದೂರವಾಗಿತ್ತು ಎಂದು ಬಿಜೆಪಿಯ ಸಂಸದರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮೊದಲನೆಯದಾಗಿ ನೇಮಕಾತಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಕಳೆದ 9 ವರ್ಷಗಳಲ್ಲಿ, ರೈಲ್ವೇಯು 4.58 ಲಕ್ಷ ಹೊಸ ನೇಮಕಾತಿಗಳನ್ನು ಮಾಡಿದೆ. ಪ್ರಸ್ತುತ ಸುಮಾರು ಲಕ್ಷ ಅಭ್ಯರ್ಥಿಗಳನ್ನು ನೇಮಿಸಲು ಪ್ರಕ್ರಿಯೆಯು ನಡೆಯುತ್ತಿದೆ. ಹೀಗಾಗಿ ನಮ್ಮ ಅಧಿಕಾರಾವಧಿಯಲ್ಲಿ 8 ಲಕ್ಷಕ್ಕೂ ಹೆಚ್ಚು ನೇಮಕಾತಿ ಮಾಡಿಕೊಂಡಂತಾಗಲಿದೆ. ಇದು ಯುಪಿಎ ಅವಧಿಯಲ್ಲಿ ನೇಮಕಗೊಂಡ 4.50 ಲಕ್ಷ ಅಭ್ಯರ್ಥಿಗಳಿಗಿಂತ ಸುಮಾರು ಶೇ 50ರಷ್ಟು ಹೆಚ್ಚು ಎಂದು ವಿವರಿಸಿದ್ದಾರೆ.
ಎರಡನೆಯದಾಗಿ, 5,518 ಸಹಾಯಕ ಲೋಕೋ ಪೈಲಟ್ಗಳು ಹೊಸದಾಗಿ ನೇಮಕಗೊಂಡಿದ್ದಾರೆ. ಈ ವಲಯವನ್ನು ನಿರ್ಲಕ್ಷಿಸುವ ನಿಮ್ಮ ಆರೋಪಗಳನ್ನು ಇದು ಅಲ್ಲಗಳೆಯುತ್ತದೆ.
ನೀವು ಹೇಳಿದ ಫೆಬ್ರವರಿ 2023ರ ಘಟನೆಯನ್ನು ರೈಲ್ವೆಯು ಕೂಲಂಕಷವಾಗಿ ತನಿಖೆ ಮಾಡಿದೆ. ಹೊಣೆಗಾರರಾದ ವಿರುದ್ಧ ಕ್ರಮ ಜರುಗಿಸಲಾಗಿದೆ. ನಿರ್ವಹಣಾ ಪದ್ಧತಿಗಳ ಕಟ್ಟುನಿಟ್ಟಿನ ಅನುಷ್ಠಾನದ ಕುರಿತು ಎಲ್ಲಾ ರೈಲ್ವೆ ಸಿಬ್ಬಂದಿಗೆ ಸಲಹೆ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಿಮ್ಮ ಪತ್ರದಲ್ಲಿ ಹೇಳಿರುವಂತೆ ಮೈಸೂರಿನಲ್ಲಿ ಯಾವುದೇ ರೈಲು ಡಿಕ್ಕಿಯಾಗಿಲ್ಲ ಎಂಬುದೂ ವಾಸ್ತವ. ವಾಟ್ಸಾಪ್ ಯೂನಿವರ್ಸಿಟಿಯಿಂದ ಪಡೆದ ಸತ್ಯಗಳ ಆಧಾರದ ಮೇಲೆ ಪ್ರಧಾನಿಗೆ ಪತ್ರ ಬರೆಯುವುದು ನಿಮ್ಮಂಥ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕನಿಗೆ ಸರಿಹೊಂದುವುದಿಲ್ಲ. ಬಹುಶಃ ವಾಟ್ಸಾಪ್ ಯೂನಿವರ್ಸಿಟಿಯ ಉಪಕುಲಪತಿಯಾಗಿ, ನೀವು ನಕಲಿ ಸುದ್ದಿಗಳನ್ನು ಸತ್ಯವೆಂದು ಪ್ರತಿಪಾದಿಸಲು ಒತ್ತಾಯಿಸಲ್ಪಟ್ಟಿದ್ದೀರಿ ಎಂದು ಕಾಣುತ್ತದೆ ಎಂದು ಸಂಸದರ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇಷ್ಟೇ ಅಲ್ಲದೆ, ಖರ್ಗೆ ಅವರು ಮಾಡಿರುವ ಪ್ರತಿಯೊಂದು ಆರೋಪಕ್ಕೂ ಸಂಸದರು ಪತ್ರದಲ್ಲಿ ಉತ್ತರ ನೀಡಿದ್ದಾರೆ.