ನವದೆಹಲಿ: ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಇದೀಗ ಸಂಪುಟ ವಿಸ್ತರಣೆಗೆ ಕಸರತ್ತು ನಡೆಯುತ್ತಿದೆ. ಸಿಎಂ, ಡಿಸಿಎಂ ಸೇರಿ ಒಟ್ಟು 10 ಮಂದಿ ಈಗ ಸ್ಥಾನ ಪಡೆದಿದ್ದಾರೆ. ಇನ್ನು ಉಳಿದಿರುವ 23 ಸ್ಥಾನಗಳನ್ನು ಹಂಚಿಕೆ ಮಾಡಬೇಕಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ದೆಹಲಿಯಲ್ಲಿ ಭರ್ಜರಿ ಪೈಪೋಟಿ ನಡೆಯುತ್ತಿದೆ. ತಮ್ಮ ಬೆಂಬಲಿಗ ಶಾಕಸರಿಗೆ ಮಂತ್ರಿ ಪಟ್ಟ ಕೊಡಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭರ್ಜರಿ ಕಸರತ್ತು ನಡೆಸಿದ್ದು, ದೆಹಲಿಯಲ್ಲಿ ಸಂಪುಟ ಸಮುದ್ರ ಮಂಥನವೇ ನಡೆಯುತ್ತಿದೆ. ಕಾಂಗ್ರೆಸ್ ಜೋಡೆತ್ತುಗಳಾದ ಸಿದ್ದರಾಮಯ್ಯ ಮತ್ತು ಡಿಕೆಶಿ ಸಂಪುಟ ಕಗ್ಗಂಟು ಬಗೆಹರಿಸಲು ದೆಹಲಿ ತಲುಪಿದ್ದಾರೆ.
ಸಿದ್ದರಾಮಯ್ಯಗೂ ಮೊದಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ದೆಹಲಿಯ ಲೋದಿ ಎಸ್ಟೇಟ್ನಲ್ಲಿರುವ ವೇಣುಗೋಪಾಲ್ ಮನೆಗೆ ಡಿಕೆಶಿ ಶಿವಕುಮಾರ್, ಡಿ.ಕೆ ಸುರೇಶ್ ಭೇಟಿ ನೀಡಿ ಸಂಪುಟ ವಿಸ್ತರಣೆ ಸಂಬಂಧ ಬಿಸಿಬಿಸಿ ಚರ್ಚೆ ನಡೆಸಿದ್ದಾರೆ. ವೇಣುಗೋಪಾಲ್ ಮನೆಗೆ ಡಿಕೆ ಶಿವಕುಮಾರ್ ಬಂದು ಹೋಗುತ್ತಿದ್ದಂತೆಯೇ ಅಲ್ಲಿಗೆ ಭೇಟಿ ನೀಡಿದ ಸಿದ್ದರಾಮಯ್ಯ ತಡರಾತ್ರಿವರೆಗೆ ವೇಣುಗೋಪಾಲ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಅತ್ತ ಮಲ್ಲಿಕಾರ್ಜುನ ಖರ್ಗೆ ಜೊತೆಗೂ ಸಿದ್ದರಾಮಯ್ಯ ಪ್ರತ್ಯೇಕವಾಗಿ ಚರ್ಚೆ ಮಾಡಿದ್ದಾರೆ. ಸಚಿವ ಸ್ಥಾನ ಹಾಗೂ ಖಾತೆ ಹಂಚಿಕೆ ಎರಡೂ ಇಂದೇ ಅಂತಿಮ ಆಗುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಶುಕ್ರವಾರವೇ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆಯಾಗುವ ಸಾಧ್ಯತೆಯಿದೆ.