ಮಂಗಳೂರು: ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿರುವ ಯು.ಟಿ. ಖಾದರ್ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದಿಂದ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದವರು. ಅಂದಿನ ‘ಉಳ್ಳಾಲ’ ಅರ್ಥಾತ್ ಇಂದಿನ ”ಮಂಗಳೂರು ವಿಧಾನಸಭಾ ಕ್ಷೇತ್ರ’ದಲ್ಲಿ ಯು.ಟಿ, ಫರೀದ್ ಅವರು 1972-1978- 1999-2004ರಲ್ಲಿ ಜಯಿಸಿದ್ದರು. ಅವರ ನಿಧನಾನಂತರ ಪುತ್ರ ಯು.ಟಿ. ಖಾದರ್ ಈ ಕ್ಷೇತ್ರವನ್ನು 2007, 2008, 2013, 2018 ಹಾಗೂ 2023ರಲ್ಲಿ ಜಯಿಸಿದ್ದಾರೆ. ಖಾದರ್ ಅವರು ಐಎ ಎಲ್ ಎಲ್ ಬಿ ಪದವೀಧರ.
ವಿಧಾನಸಭೆಯ ಅತ್ಯುತ್ತಮ ಅವಧಿಯ ಕಾರ್ಯ ವೈಖರಿಗಾಗಿ ‘ಸದನ ವೀರ’ ಹಾಗೂ ‘ಶೈನಿಂಗ್ ಇಂಡಿಯಾ’ ಅವಾರ್ಡ್ ಪ್ರಶಸ್ತಿ ಗಳಿಸಿದ್ದರು. ಕರ್ನಾಟಕ ವಿಧಾನಸಭೆಯ ವಿಪಕ್ಷದ ಉಪನಾಯಕನಾಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸಿದ್ದರು. ಬೈಕ್ ಆ್ಯಂಬುಲೆನ್ಸ್ 108, ಆರೋಗ್ಯಶ್ರೀ, ದಂತ ಭಾಗ್ಯ, ಸರಕಾರೀ ತಾಲೂಕು ಡಯಾಲಿಸಿಸ್ ಘಟಕ, ಆಸ್ಪತ್ರೆಗಳಲ್ಲಿ ಹರೀಶ್ ಸಾಂತ್ವನ ಯೋಜನೆ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದ್ದರು. ಕೇಂದ್ರ ಸರಕಾರ ನೀಡುವ ಉತ್ತಮ ಆರೋಗ್ಯ ಸಚಿವ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿದ್ದರು.
2016ರಿಂದ 2018ರ ತನಕ ಆಹಾರ ಸಚಿವರಾಗಿಪಡಿತರಚೀಟಿಗಾಗಿಸಲ್ಲಿಸಬೇಕಾಗಿದ್ದ 10ರಿಂದ 13 ದಾಖಲೆಗಳನ್ನು ಕಡಿತಗೊಳಿಸಿ ಕೇವಲ ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಿ ಮನೆ ಬಾಗಿಲಿಗೆ ರೇಷನ್ ಕಾರ್ಡ್ ತಲುಪಿಸಲು ಶ್ರಮಿಸಿದ್ದರು. 2018ರಲ್ಲಿ ಮೈತ್ರಿ ಸರಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಮಂಗಳೂರು ಸ್ಟಾರ್ಟ್ ಸಿಟಿ ಸಹಿತ ಹಲವು ಯೋಜನೆಗೆ ವೇಗ ನೀಡಿದ್ದರು. ಜನಪರ ಕೆಲಸ ಕಾರ್ಯಗಳ ಜತೆಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದ್ದು, ಜಾತಿ-ಧರ್ಮ ಹೊರತಾಗಿ ಎಲ್ಲರೊಂದಿಗೆ ನಿಕಟ ಜನಸಂಪರ್ಕ ಪಡೆದಿರುವುದು ಹಾಗೂ ಜಾತ್ಯತೀತ ನಿಲುವು ಪ್ರದರ್ಶಿಸಿ ಅದರಂತೆ ನಡೆದುಕೊಳ್ಳುತ್ತಿರುವುದು ಖಾದರ್ ಹೆಗ್ಗಳಿಕೆ.