ಬೆಳ್ತಂಗಡಿ: ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಜ.9 ರಿಂದ ನಡೆದ ರಾಷ್ಟ್ರಮಟ್ಟದ ಪದವಿಪೂರ್ವ ಕಾಲೇಜು ವಿಭಾಗದ ಬಾಲಕಿಯರ 19 ವಯೋಮಾನದ ವಾಲೀಬಾಲ್ ಪಂದ್ಯಾಟದಲ್ಲಿ ಜ. 12 ರಂದು ನಡೆದ ಅಂತಿಮ ಪಂದ್ಯದಲ್ಲಿ ಕೇರಳ ತಂಡ ಅತಿಥೇಯ ಕರ್ನಾಟಕ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಫೈನಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕನಾಟಕ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಫೈನಲ್ ಪಂದ್ಯಾಟದಲ್ಲಿ ಕೇರಳ ತಂಡ (25-18,25-23,25-21) ನೇರ ಸೆಟ್ ಗಳಲ್ಲಿ ಗೆಲುವನ್ನು ತನ್ನದಾಗಿಸಿಕೊಂಡರು. ವಿಜೇತ ತಂಡದ ಪರವಾಗಿ ನಾಯಕಿ ಅನ್ನಾ ಮ್ಯಾಥ್ಯೂ ಹಾಗೂ ವರ್ಣ ಉತ್ತಮ ಹೊಡೆತಗಳ ಮೂಲಕ ಗಮನ ಸೆಳೆದರೆ ಗ್ಲಾಡಿಯಸ್ ಅವರು ನಿರ್ಮಿಸಿದ ತಡೆಗೋಡೆ ಸದಾ ಕರ್ನಾಟಕವನ್ನು ಕಾಡಿತ್ತು. ಕರ್ನಾಟಕದ ಪರವಾಗಿ ನಾಯಕಿ ಮೇಘನ ಅವರು ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದರು. ಯಶೋಧ, ಶಾಲಿ ಹಾಗೂ ಇತರರು ಬೆಂಬಲ ನೀಡಿದರೂ ಕೇರಳ ತಂಡದ ಎದುರು ಸಾಕಾಗಲಿಲ್ಲ. ಮೂರನೇ ಸೆಟ್ ನಲ್ಲಿ ಕರ್ನಾಟಕ ಗೆಲ್ಲುವ ಹಂತದಲ್ಲಿದ್ದರೂ ಕೊನೆ ಕ್ಷಣದಲ್ಲಿ ವೈಫಲ್ಯ ಕಂಡಿತು.
ಮೂರು ಹಾಗೂ ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯಾಟದಲ್ಲಿ ಉತ್ತರಪ್ರದೇಶ ತಂಡ ಪಶ್ಚಿಮ ಬಂಗಾಳ ತಂಡವನ್ನು 3-1 ಅಂತರದಲ್ಲಿ (25-19,18-25,25-22,25-15) ಗೆಲುವನ್ನು ತನ್ನದಾಗಿಸಿಕೊಂಡಿತು.
ಗುರುವಾರ ಬೆಳಿಗ್ಗೆ ನಡೆದ ಮೊದಲ ಸೆಮಿಫೈನಲ್ ಪಂದ್ಯಾಟದಲ್ಲಿ ಕೇರಳ ತಂಡ ಉತ್ತರಪ್ರದೇಶ ತಂಡವನ್ನು (25-15,25-10,25-19) ಅಂಕಗಳೊಂದಿಗೆ ನೇರ ಸೆಟ್ ಗಳಲ್ಲಿ ಮಣಿಸಿ ಅಂತಿಮ ಹಣಾಹಣಿಗೆ ಅರ್ಹತೆಯನ್ನು ಪಡೆದುಕೊಂಡಿತ್ತು. ಬಲವಾದ ಹೊಡೆತಗಳೊಂದಿಗೆ ಉತ್ತಮ ಆಟ ಪ್ರದಶಿಸಿದ ಕೇರಳ ತಂಡದ ಎದುರು ಯಾವುದೇ ಪ್ರತಿರೋಧ ವ್ಯಕ್ತಪಡಿಸಲು ಉತ್ತರಪ್ರದೇಶ ತಂಡಕ್ಕೆ ಸಾಧ್ಯವಾಗಲಿಲ್ಲ.
ಎರಡನೆಯ ಸೆಮಿಫೈನಲ್ ಪಂದ್ಯಾಟದಲ್ಲಿ ಅತಿಧೇಯ ಕರ್ನಾಟಕ ತಂಡ ಪಶ್ಚಿಮ ಬಂಗಾಳ ತಂಡವನ್ನು ನೇರ ಸೆಟ್ ಗಳಲ್ಲಿ ಸೋಲಿಸಿದೆ( 25-12,25-18,25-23) ಸಹಸ್ರಾರು ಬೆಂಬಲಿಗರ ಚಪ್ಪಾಳೆಯ ನಡುವೆ ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯ ತಂಡ ಯಾವ ಹಂತದಲ್ಲಿಯೂ ಪಶ್ಚಿಮ ಬಂಗಾಳ ತಂಡಕ್ಕೆ ಗೆಲ್ಲುವ ಅವಕಾಶವನ್ನೇ ನೀಡಲಿಲ್ಲ.
ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ, ಹಷೇಂದ್ರ ಕುಮಾರ್, ಸುಪ್ರೀಯಾ ಹಷೇಂದ್ರ ಕುಮಾರ್ ಅಂತಿಮ ಪಂದ್ಯ ವೀಕ್ಷಿಸಿದರು. ಡಿ. ಶ್ರೇಯಸ್ ಕುಮಾರ್, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಪ್ರಭಾಕರ್, ಕಾರ್ಯದರ್ಶಿ ಡಾ.ಬಿ. ಯಶೋವರ್ಮ, ಎಸ್ಡಿಎಂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ದಿನೇಶ್ ಚೌಟ, ನಾಗೇಶ್ ಕದ್ರಿ, ವೀರೇಶ್ ಶಾ ಕೋಚ್ ಗಳು, ರೆಫರಿಗಳು ಸಮಾರೋಪದಲ್ಲಿ ಉಪಸ್ಥಿತರಿದ್ದರು.
ಬಂಗಾಳದ ದೇಬಶೀಶ್ ಬೆಹ್ವಾನ್ ಅವರು ಸರ್ವಾಂಗೀಣ ಆಟಗಾರ್ತಿಯಾಗಿ, ಕೇರಳದ ಅಭಿರಾಮಿ ಅತ್ಯುತ್ತಮ ಸೆಟ್ಟರ್ ಆಗಿ, ಕರ್ನಾಟಕ ತಂಡದ ನಾಯಕಿ ಯಶೋಧಾ ಉತ್ತಮ ಅಟಾಕರ್ ಆಗಿ, ಕೇರಳದ ಅನ್ನಾ ಮ್ಯಾಧ್ಯೂ ಅವರು ವೈಯಕ್ತಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.