ನವದೆಹಲಿ: ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವಂತಹ ಮದ್ಯ ದೊರೆ ವಿಜಯ್ ಮಲ್ಯ, ತಾನು ಬ್ಯಾಂಕ್ ಗಳಿಗೆ ಶೇ.100ರಷ್ಟು ಸಾಲ ಮರುಪಾವತಿಸಲು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಿಂಗ್ ಫಿಷರ್ ಏರ್ ಲೈನ್ಸ್ ನಷ್ಟಕ್ಕೆ ಒಳಗಾಗಲು ದುಬಾರಿ ಎಟಿಎಫ್ ಬೆಲೆಗಳೇ ಕಾರಣವಾಗಿದೆ. ಕಿಂಗ್ ಫಿಷರ್ ಸಮಯದಲ್ಲಿ ಕಚ್ಚಾ ತೈಲದ ಬೆಲೆಯು ಬ್ಯಾರೆಲ್ ಗೆ 140 ಡಾಲರ್ ಆಗಿತ್ತು. ಇದರಿಂದ ನಷ್ಟವಾಯಿತು ಮತ್ತು ಬ್ಯಾಂಕ್ ಗಳ ಹಣ ಹೋಯಿತು. ನಾನು ಶೇ.100ರಷ್ಟು ಸಾಲ ಮರುಪಾವತಿ ಮಾಡುವುದಾಗಿ ತಿಳಿಸಿದ್ದೆ.
ಮಲ್ಯ ವಿವಿಧ ಬ್ಯಾಂಕ್ ಗಳಿಗೆ ಸುಮಾರು 9 ಸಾವಿರ ಕೋಟಿ ರೂ. ಬಾಕಿಯಿರಿಸಿಕೊಂಡಿದ್ದಾರೆ. ಇದರ ಬಳಿಕ 2016ರ ಮಾರ್ಚ್ ನಲ್ಲಿ ಅವರು ದೇಶ ಬಿಟ್ಟು ಪಲಾಯನ ಮಾಡಿದ್ದರು.
ಕಳೆದ ಫೆಬ್ರವರಿಯಲ್ಲಿ ಭಾರತ ಸರ್ಕಾರವು ಮಲ್ಯ ಅವರನ್ನು ಭಾರತಕ್ಕೆ ಒಪ್ಪಿಸುವಂತೆ ಇಂಗ್ಲೆಂಡ್ ಗೆ ಮನವಿ ಮಾಡಿಕೊಂಡಿತ್ತು. ಈ ಬಗ್ಗೆ ಅಲ್ಲಿನ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.