ಕಾಸರಗೋಡು : ಜಿಲ್ಲೆಯಲ್ಲಿ ಭೂಗರ್ಭ ಜಲ ಮಟ್ಟ ಕುಸಿದಿರುವುದರ ಹಿನ್ನೆಲೆಯಲ್ಲಿ, ಇಲ್ಲಿನ ಸ್ಥಿತಿಗತಿ ಅವಲೋಕನ ನಡೆಸುವ ನಿಟ್ಟಿನಲ್ಲಿ ಕೇಂದ್ರ ಜಲಶಕ್ತಿ ಅಭಿಯಾನ ಯೋಜನೆಯ ಜಿಲ್ಲಾ ಮಟ್ಟದ ಹೊಣೆಗಾರಿಕೆಯ ಅಧಿಕಾರಿ ಅಶೋಕ್ ಕುಮಾರ್ ಅವರು ಜಿಲ್ಲೆಗೆ ಆಗಮಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ, ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು.
ಜಲಸಂರಕ್ಷಣೆ ಚಟುವಟಿಕೆಗಳನ್ನು ಸುಧಾರಿತಗೊಳಿಸುವನಿಟ್ಟಿನಲ್ಲಿ ಜಾರಿಗೊಳಿಸುವ ಜಲಶಕ್ತಿ ಅಭಿಯಾನ ಯೋಜನೆಗೆ ರಾಜ್ಯದಿಂದ ಕಾಸರಗೋಡು ಮತ್ತು ಪಾಲಕ್ಕಾಡ್ ಜಿಲ್ಲೆಗಳನ್ನು ಆಯ್ಕೆ ಮಡಲಾಗಿದೆ. ಜಲವಿನಿಮಯ, ಪರಿಹಾರ ವಿಧಾನಗಳು ಇತ್ಯಾದಿಗಳ ಕುರಿತು ಅವರು ಚರ್ಚೆ ನಡೆಸಿದರು.
ವಿವಿಧ ವಿಚಾರಗಳ ಕುರಿತು ವಿಭಾಗಗಳ ಮುಖ್ಯಸ್ಥರು ವರದಿ ಸಲ್ಲಿಸಿದರು. ಅವೈಜ್ಞಾನಿಕ ಜಲಬಳಕೆ ರೀತಿ ಇಂದಿನ ದುಸ್ಥಿತಿಗೆ ಪ್ರಧಾನ ಕಾರಣ ಎಂದು ವರದಿಗಳು ಅಭಿಪ್ರಾಯಪಟ್ಟಿವೆ. ರಾಜ್ಯದಲ್ಲಿ ಸರಾಸರಿ ಭೂಗರ್ಭಜಲ ಬಳಕೆ ಶೇ 51.27 ಆಗಿರುವ ವೇಳೆ, ಅನಿಯಂತ್ರಿತ ಕೊಳವೆಬಾವಿ ಕಾರಣ ಜಿಲ್ಲೆಯಲ್ಲಿ ಶೇ 79.64 ಆಗಿದೆ. 12 ನದಿಗಳಿರುವ ಜಿಲ್ಲೆಯಲ್ಲಿ ಜಲಸಂರಕ್ಷಣೆ ಚಟುವಟಿಕೆಗಳಿಗೆ ಅಪಾರ ಸಾಧ್ಯತೆಗಳಿದ್ದು, ಜಿಲ್ಲೆಯ ಶಕ್ತಿಅಭಿಯಾನದ ನೋಡೆಲ್ ಅಧಿಕಾರಿ,ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ.ಅಶೋಕ್ ಕುಮಾರ್ ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಇಲಾಖೆಗಳು ಜಾರಿಗೊಳಿಸುವ ಜಲಸಂರಕ್ಷಣೆ ಚಟುವಟಿಕೆಗಳು ಏಕೀಕರಣಗೊಳ್ಳದೇ ಇರುವುದು ಯೋಜನೆಗಳುಫಲದಾಯಕವಾಗದೇ ಇರಲು ಕಾರಣ ಎಂದು ಸಿ.ಪಿ.ಸಿ.ಆರ್.ಐ. ಪ್ರಧಾನ ವಿಜ್ಞಾನಿ ಡಾ.ಸಿ.ತಂಬಾನ್ ತಿಳಿಸಿದರು. ಭತ್ತದ ಗದ್ದೆಗಳು ಅಡಕೆ ತೋಟಗಳಾಗಿ ಮಾರ್ಪಾಡುಗೊಳ್ಳುತ್ತಿರುವುದು ನೈಸರ್ಗಿಕ ಜಲ ರೀಚಾರ್ಜ್ ಪ್ರಕ್ರಿಯೆಗೆ ಪ್ರತಿಬಂಧಕವಾಗಿದೆ ಎಂದವರು ಅಭಿಮತ ವ್ಯಕ್ತಪಡಿಸಿದರು.
ವಿವಿಧ ಇಲಾಖೆಗಳ ಸಹಕಾರದಿಂದ ಹರಿತ ಕೇರಳಂ ಮಿಷನ್ ನಡೆಸುತ್ತಿರುವ ಚಟುವಟಿಕೆಗಳ ಕುರಿತು ಸಂಚಾಲಕ ಪಿ.ಎನ್.ಸುಬ್ರಹ್ಮಣ್ಯನ್ ಮಾಹಿತಿ ನೀಡಿದರು.
ಕೊಳವೆ ಬಾವಿಗಳಲ್ಲಿ ಕೆಲವೆಡೆ ಅವೈಜ್ಞಾನಿಕವಾಗಿ ಜಲ ರೀಚಾರ್ಜ್ ನಡೆಸುವ ಕ್ರಿಯೆ ನಡೆಸಲಾಗುತ್ತಿದ್ದು, ಇದು ಭೂಗರ್ಭ ಜಲವನ್ನು ಕಲುಷಿತಗೊಳಿಸುತ್ತಿದೆ ಎಂದು ಜಲಪ್ರಾಧಿಕಾರದ ಪ್ರತಿನಿಧಿಗಳು ಕಳಕಳಿ ವ್ಯಕ್ತಪಡಿಸಿದರು.
ಎಲ್ಲ ವರದಿಗಳನ್ನೂ ಅಧ್ಯಯನ ನಡೆಸಿ ಪರಿಹಾರ ಒದಗಿಸುವ ಬಗ್ಗೆ ಕೇಂದ್ರ ಪ್ರತಿನಿಧಿ ಮಾತುಕತೆ ನಡೆಸಿದರು.
ಹುಸೂರು ಶಿರಸ್ತೇದಾರ್ ಕೆ.ನಾರಾಯಣನ್, ಜಿಯಾಲಜಿಸ್ಟ್ ದಿವಾಕರನ್ ವಿಷ್ಣುಮಂಗಲಂ, ಬಿ.ಷಾಬಿ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು. (ಜು.6)ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. ಕೇಂದ್ರ ಜಲಶಕ್ತಿ ಅಭಿಯಾನದ ಜಿಲ್ಲಾ ಮಟ್ಟದ ಹೊಣೆಗಾರಿಕೆಯ ಅಧಿಕಾರಿ ಅಶೋಕ್ ಕುಮಾರ್ ಸಿಂಗ್ ಅಧ್ಯಕ್ಷರುಗಳೊಂದಿಗೆ ಮಾತುಕತೆ ನಡೆಸುವರು.