ಮಧುರೈ: ರಜನಿಕಾಂತ್ ಅವರ ಪಕ್ಷದ ಜೊತೆ ಮಕ್ಕಳ್ ನೀದಿಮಯಂ’ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬ ಊಹಾಪೋಹಗಳಿಗೆ ಸದ್ಯ ತೆರೆ ಬಿದ್ದಿದ್ದು ಈ ಮೈತ್ರಿಯನ್ನು ಕಮಲ್ ಹಾಸನ್ ನಿರಾಕರಿಸಿದ್ದಾರೆ.
ಮಧುರೈನಲ್ಲಿ ಭಾನುವಾರ ತಮ್ಮ ಪಕ್ಷದ ಅಭಿಯಾನಕ್ಕೆ ಚಾಲನೆ ನೀಡಿದ ಕಮಲ್ ಹಾಸನ್ ಮಾಧ್ಯಮಗಳೊಂದಿಗೆ ಮಾತನಾಡಿ ಹಳೇ ಮೈತ್ರಿ ಮುರಿದು ಹೊಸ ಮೈತ್ರಿ ಪ್ರಾರಂಭವಾಗುವ ಮುನ್ಸೂಚನೆ ನೀಡಿದ್ದಾರೆ.
ರಜನಿಕಾಂತ್ ಅವರ ಪಕ್ಷದೊಂದಿಗೆ ಭವಿಷ್ಯದಲ್ಲಿ ಯಾವುದಾದರೂ ಚುನಾವಣಾ ಒಪ್ಪಂದವನ್ನು ಮಾಡಿಕೊಳ್ಳುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್, ‘ಮೈತ್ರಿಗಳ ಬಗ್ಗೆ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ, ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿದ್ದಾರೆ.
‘ಮಕ್ಕಳ್ ನೀದಿಮಯಂ’ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ತೃತೀಯ ರಂಗವೇನಾದರೂ ರಚನೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ಯಾವಾಗ ಸಂಭವಿಸುತ್ತದೆ ಎಂದು ಬಹಿರಂಗಪಡಿಸಲು ಆಗದು ಎಂದು ಉತ್ತರಿಸಿದ್ದಾರೆ.
ತಮಿಳುನಾಡಿನ ಹಲವೆಡೆಗಳಲ್ಲಿ ಪ್ರಚಾರ ಅಭಿಯಾನ ಕೈಗೊಳ್ಳಲು ಸರ್ಕಾರ ಕಮಲ್ಹಾಸನ್ ಅವರಿಗೆ ಅನುಮತಿ ನಿರಾಕರಿಸಿರುವ ಕುರಿತು ಮಾತನಾಡಿದ ಅವರು, ‘ಇಂಥ ಅಡೆತಡೆಗಳು ಹೊಸತೇನಲ್ಲ. ನಾವು ಕೋವಿಡ್ ನಿಯಮಾವಳಿಗಳನ್ನು ಪಾಲಿಸುತ್ತಲೇ ಜನರನ್ನು ತಲುಪಲು ಸಜ್ಜಾಗಿದ್ದೇವೆ ಎಂದಿದ್ದಾರೆ.
ತಮ್ಮ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ, ಮಧುರೈಯನ್ನು ತಮಿಳುನಾಡಿನ ಎರಡನೇ ರಾಜಧಾನಿಯಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಬೆಂಬಲದೊಂದಿಗೆ ಭ್ರಷ್ಟಾಚಾರವನ್ನು ತೊಡೆದುಹಾಕುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಅವರ ಮಕ್ಕಳ್ ನೀದಿಮಯಂ’ ಪಕ್ಷವು ತನ್ನ ಮೊದಲ ಚುನಾವಣೆ ಎದುರಿಸಿ 38 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಯಾವುದೇ ಸ್ಥಾನವನ್ನು ಗೆಲ್ಲದೇ ಒಟ್ಟಾರೆ ಕೇವಲ 3.77 ರಷ್ಟು ಮತಗಳನ್ನ ಮಾತ್ರ ಪಡೆದಿತ್ತು.