ನವದೆಹಲಿ: ದೆಹಲಿಯ 20 ವರ್ಷದ ಯುವಕ ಅಪರೂಪದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ವಡೋದರದಲ್ಲಿ ಮೆದುಳು ನಿಷ್ಕ್ರಿಯವಾಗಿದ್ದ 17 ವರ್ಷದ ಯುವತಿಯ ಹೃದಯವನ್ನು ಕಸಿ ಮಾಡುವ ಮೂಲಕ ಏಮ್ಸ್ ವೈದ್ಯರು ಯುವಕನಿಗೆ ಹೊಸ ಜೀವನ ಕೊಟ್ಟಿದ್ದಾರೆ.
ಇದು ಈ ವರ್ಷ ಏಮ್ಸ್ನ 3ನೇ ಹೃದಯ ಕಸಿ ಶಸ್ತ್ರಚಿಕಿತ್ಸೆಯಾಗಿದ್ದು, ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಕೋವಿಡ್ 19 ಲಾಕ್ ಡೌನ್ ಮುನ್ನ ನಡೆದಿದ್ದವು.
20 ವರ್ಷದ ಯುವಕ ಹುಟ್ಟಿನಿಂದಲೇ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದನು, ಈ ಸಮಸ್ಯೆಯನ್ನು ‘ಎಬ್ಸ್ಟೈನ್ ಅನಾಮಲಿ’ ಎಂದು ಕರೆಯಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಈತ ಏಮ್ಸ್ ಗೆ ಭೇಟಿ ನೀಡುತ್ತಿದ್ದ. ಇದರಿಂದ ಆತನ ಹೃದಯ ದುರ್ಬಲಗೊಂಡಿತ್ತು. ಹೃದಯದ ಬಲಭಾಗ ರಕ್ತವನ್ನು ಪಂಪ್ ಮಾಡಲಾಗುತ್ತಿರಲಿಲ್ಲ.
“ಕಳೆದ ಆರು ತಿಂಗಳಲ್ಲಿ, ಅವನ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು, ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದನು. ಆತನಿಗೆ ತುರ್ತಾಗಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಸಬೇಕಾದ ಅಗತ್ಯವಿತ್ತು. ಇದೆ ಸಂಧರ್ಭಕ್ಕೆ ಗುಜರಾತ್ನಿಂದ ದಾನಿಯ ಹೃದಯದ ಲಭ್ಯತೆ ಬಗ್ಗೆ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯಿಂದ ನಮಗೆ ಮಾಹಿತಿ ಬಂದಿತ್ತು” ಎಂದು ಕಾರ್ಡಿಯೋಥೊರಾಸಿಕ್ ಮತ್ತು ವಾಸ್ಕುಲರ್ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ಮಿಲಿಂದ್ ಹೊಟೆ ಹೇಳಿದ್ದಾರೆ.
ಗುರುವಾರ ಬೆಳಿಗ್ಗೆ ಗುಜರಾತ್ ನ ವಡೋದರಾಕ್ಕೆ ತೆರಳಿದ್ದ ಏಮ್ಸ್ ತಂಡವು ಹೃದಯವನ್ನು ತೆಗೆದು ಕೊಂಡು ದೆಹಲಿಗೆ ಬಂದು ಸುಮಾರು ಏಳು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಯುವಕನಿಗೆ ಹೃದಯ ಕಸಿ ಮಾಡಲಾಗಿದೆ.
ವೈದ್ಯರ ಈ ಕೆಲಸಕ್ಕೆ ದೆಹಲಿ ಪೊಲೀಸರು ಸಹ ಕೈಜೋಡಿಸಿದ್ದು, ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ಏಮ್ಸ್ವರೆಗೆ ಸುಮಾರು 18 ಕಿ.ಮೀ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು, ಕೇವಲ 12 ನಿಮಿಷದಲ್ಲಿ ಆಸ್ಪತ್ರೆ ಸೇರಲು ಸಹಕಾರಿಯಾದರು.