ನವದೆಹಲಿ : 13,000 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಪರಾರಿಯಾದ ವಜ್ರೋದ್ಯಮಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯ ಕುರಿತ ವಿಚಾರಣೆಯನ್ನು ಯುಕೆ ನ್ಯಾಯಾಲಯ ಜನವರಿ 8ರಂದು ಪೂರ್ಣಗೊಳಿಸಿತು. ಫೆಬ್ರವರಿ 25 ರಂದು ತನ್ನ ಅಂತಿಮ ತೀರ್ಪಿನ ದಿನಾಂಕ ನಿಗದಿಪಡಿಸಿದೆ.
ನೀರವ್ ಮೋದಿ ಅವರು ಬ್ಯಾಂಕ್ ಅಧಿಕಾರಿಗಳೊಂದಿಗೆ ಪಿತೂರಿ ನಡೆಸಿದ ಬಳಿಕ ತಮ್ಮ ಮೂರು ಸಂಸ್ಥೆಗಳಾದ ಡೈಮಂಡ್ಸ್ ಆರ್ ಅಸ್, ಸೋಲಾರ್ ರಫ್ತು ಮತ್ತು ಸ್ಟೆಲ್ಲಾರ್ ಡೈಮಂಡ್ಸ್ ಬಳಸಿ ಬ್ಯಾಂಕ್ಗಳಿಗೆ ಮೋಸ ಮಾಡಿದ್ದಾರೆ. ಪ್ರಕರಣದಲ್ಲಿ ಸಾಕ್ಷಿ ಹೇಳುವವರಿಗೂ ಮಾರಣಾಂತಿಕ ಬೆದರಿಕೆ ಹಾಕಿದ್ದಾರೆ. ತನ್ನ ವಿರುದ್ಧ ಸಾಕ್ಷ್ಯ ಹೇಳದಂತೆ ಎಚ್ಚರಿಕೆ ನೀಡಿದ್ದಾರೆ ಈ ಮೂಲಕ ಸಾಕ್ಷಿ ನಾಶದ ಪ್ರಕರಣವನ್ನು ಎದುರಿಸುತ್ತಿದ್ದಾರೆ ಎಂದು ಸಿಪಿಎಸ್ ನ್ಯಾಯಾಲಯಕ್ಕೆ ತಿಳಿಸಿತು.
ಲಂಡನ್ನ ವಾಂಡ್ಸ್ವರ್ತ್ ಜೈಲಿನಲ್ಲಿ ಇರುವ ನೀರವ್ ಅವರು ವಿಡಿಯೋ ಲಿಂಕ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಭಾರತೀಯ ತನಿಖಾ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿರುವ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (ಸಿಪಿಎಸ್) ನೀರವ್ ಅವರು ‘ವಂಚನೆಯಲ್ಲಿ ಭಾಗಿಯಾಗಿ, ಅಕ್ರಮವಾಗಿ ಹಣ ವರ್ಗಾವಣೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು.