ಬೆಂಗಳೂರು: ಫೆ. 22ರಿಂದ ರಾಜ್ಯದಲ್ಲಿ 6ರಿಂದ 8ನೇ ತರಗತಿಗಳನ್ನು ಪ್ರಾರಂಭಿಸಲು ಕಳೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕುರಿತು ಅಧಿಕೃತ ಆದೇಶವನ್ನು ರಾಜ್ಯ ಸರ್ಕಾರ ಇಂದು ಹೊರಡಿಸಿದೆ.
ಕಳೆದ ಮಂಗಳವಾರ (ಫೆ.16) ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು,6ರಿಂದ ದ್ವಿತೀಯ ಪಿಯುವರೆಗೆ ದಿನ ಪೂರ್ತಿ ತರಗತಿ ನಡೆಯಲಿದೆ.ಆರೋಗ್ಯ ಇಲಾಖೆ ಶಾಲೆಗೆ ಹಾಜರಾಗುತ್ತಿರುವ ಮಕ್ಕಳ ರ್ಯಾಡಮ್ ಕೋವಿಡ್ ಪರೀಕ್ಷೆ ನಡೆಸಲಿದೆ. ಆದರೆ ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಸಹಿತ ಕೇರಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳ ಶಾಲೆಗಳಲ್ಲಿ ಅಂದಿನಿಂದ 8ನೇ ತರಗತಿಗೆ ಮಾತ್ರ ಶಾಲೆ, 7ನೇ ತರಗತಿ ಹಾಗೂ ಅದಕ್ಕಿಂತ ಕಿರಿಯ ತರಗತಿಗಳಿಗೆ ಎಂದಿನಂತೆ ವಿದ್ಯಾಗಮ ಮುಂದುವರಿಯಲಿದೆ.
ಕೇರಳದಿಂದ ಗಡಿಯ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೆಗೆಟಿವ್ ಫಲಿತಾಂಶವಿದ್ದರೆ ಮಾತ್ರ ಶಾಲೆಗೆ ಹಾಜರಾಗಬೇಕು. 6ರಿಂದ 8ನೇ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪಾಲಕ ಅಥವಾ ಪೋಷಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯ ಎಂದು ತಿಳಿಸಲಾಗಿದೆ.