ನವದೆಹಲಿ: ಕೋವಿಡ್ ಎರಡನೇ ಅಲೆಯಿಂದ ತೊಂದರೆಗೆ ಒಳಗಾಗಿರುವ ಬಡವರ ನೆರವಿಗೂ ಧಾವಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಇದೇ ಹಿನ್ನಲೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಡ ಜನರಿಗೆ ಉಚಿತವಾಗಿ ಆಹಾರ ಧಾನ್ಯ ನೀಡಲು ತೀರ್ಮಾನಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಕೋವಿಡ್ ಎರಡನೇ ಅಲೆಯಿಂದಾಗಿ ಜನರು ತತ್ತರಿಸಿದ್ದಾರೆ. ಒಂದು ಕಡೆ ವೈದ್ಯಕೀಯ ತುರ್ತು ಪರಿಸ್ಥಿತಿ ಏರ್ಪಟ್ಟಿದ್ದರೆ, ಮತ್ತೊಂದು ಕಡೆ ಕರ್ಫ್ಯೂ, ಲಾಕ್ಡೌನ್ನಿಂದಾಗಿ ಬಡ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ಪೌಷ್ಠಿಕ ಆಹಾರ ತುರುಕುವುದು ಅತಿ ಮುಖ್ಯ. ಅದರಿಂದ ಮೇ ಮತ್ತು ಜೂನ್ ಎರಡು ತಿಂಗಳ ಆಹಾರ ಧಾನ್ಯಗಳನ್ನು ಬಡ ಕೂಲಿಕಾರ್ಮಿಕ ವರ್ಗದವರಿಗೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಳೆದ ವರ್ಷ ಕೂಡ ಲಾಕ್ ಡೌನ್ ನಿಂದಾಗಿ ಅನೇಕ ಮಂದಿ ಸಂಕಷ್ಟ ಅನುಭವಿಸಿದರು. ಆ ಸಂದರ್ಭದಲ್ಲಿಯೂ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಗಿತ್ತು.
ಅಂತೆಯೇ ಇದೀಗ ಮತ್ತೆ ಅಂತಹ ಕೆಲಸಕ್ಕೆ ಕೈ ಹಾಕಿರುವ ಸರ್ಕಾರ, ಬಡವರ ಕಲ್ಯಾಣಕ್ಕೆ ಬದ್ದವಾಗಿದೆ ಎಂಬುವುದನ್ನು ಮತ್ತೆ ನಿರೂಪಿಸಲು ಸಿದ್ಧವಾಗಿದೆ. ಇದೇ ಹಿನ್ನಲೆ ಪ್ರಧಾನಮಂತ್ರಿಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಐದು ಕೆಜಿ ಅಕ್ಕಿ ಮತ್ತು ಆಹಾರ ಧಾನ್ಯವನ್ನು ದೇಶದ ಬಡ ಜನರಿಗೆ ನೀಡಲಾಗುವುದು. ದೇಶದ 80 ಕೋಟಿ ಫಲಾನುಭವಿಗಳಿಗೆ ಈ ಯೋಜನೆ ತಲುಪಲಿದೆ. ಇದಕ್ಕಾಗಿ ಸರ್ಕಾರ 26 ಸಾವಿರ ಕೋಟಿ ರೂ ವ್ಯಯಿಸಲಿದೆ ಎಂದು ಮೋದಿ ತಿಳಿಸಿದ್ದಾರೆ.