ರಾಮನಗರ: ತುರ್ತು ಸಂದರ್ಭದಲ್ಲಿ ಕೋವಿಡ್ ಸೋಂಕಿತರಿಗೆ ಪ್ರಾಣವಾಯು ಒದಗಿಸಲು ಪೈಪ್ಲೈನ್ ವ್ಯವಸ್ಥೆ ಮಾಡುವ ಮೂಲಕ ಸರ್ಕಾರಿ ವೈದ್ಯರೊಬ್ಬರು ಮಾದರಿಯಾಗಿದ್ದಾರೆ.
ಜಿಲ್ಲೆಯ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಕೀಲು ತಜ್ಞ ಡಾ.ರಾಜ್ಕುಮಾರ್ ತಮ್ಮ ಸಹೋದರ ಶಿವಕುಮಾರ್ ಅವರ ನೆರವಿನೊಂದಿಗೆ ₹ 1.5 ಲಕ್ಷ ವ್ಯಯಿಸಿ ತಾವು ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಸರಬರಾಜು ಪಾಯಿಂಟ್ಗಳನ್ನು ಹಾಕಿಸಿದ್ದಾರೆ. ಇದರಿಂದ ತುರ್ತು ಸಂದರ್ಭದಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗದೆಯೇ ಆಮ್ಲಜನಕ ಬಳಸಿಕೊಳ್ಳಲು ಅವಕಾಶವಿದೆ.
ಆಸ್ಪತ್ರೆಯ ಸಾಮಾನ್ಯ ರೋಗಿಗಳ ವಿಭಾಗದಲ್ಲಿ 6 ಹಾಗೂ ಆಸ್ಪತ್ರೆ ಹೊರ ಆವರಣದಲ್ಲಿರುವ ಫೀವರ್ ಕ್ಲಿನಿಕ್ ಸಮೀಪ 9 ಕಡೆ ವೈದ್ಯಕೀಯ ಆಮ್ಲಜನಕ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಆಸ್ಪತ್ರೆಯ ಆಮ್ಲಜನಕ ಸಿಲಿಂಡರ್ ಸಂಪರ್ಕ ಇದ್ದು, ದಿನದ 24 ಗಂಟೆಯೂ ಆಮ್ಲಜನಕ ಸಿಗುವ ವ್ಯವಸ್ಥೆ ಇದೆ. ಏಕಕಾಲಕ್ಕೆ 4 ಸಿಲಿಂಡರ್ಗಳನ್ನು ಬಳಸಿಕೊಳ್ಳಬಹುದಾಗಿದೆ.‘ನಮ್ಮ ಆಸ್ಪತ್ರೆಯ ಆಮ್ಲಜನಕ ಹಾಸಿಗೆಗಳು ಸದ್ಯ ಭರ್ತಿಯಾಗಿವೆ. ಹೀಗಾಗಿ ಇಲ್ಲಿಗೆ ಬರುವ ಸೋಂಕಿತರಿಗೆ ತುರ್ತಾಗಿ ಆಮ್ಲಜನಕ ಬೇಕಿದ್ದಲ್ಲಿ ಅವರು ಈ ಪಾಯಿಂಟ್ಗಳನ್ನು ಉಪಯೋಗಿಸಿಕೊಳ್ಳಬಹುದು. ಆಮ್ಲಜನಕ ಪಡೆಯಲು ಆಸ್ಪತ್ರೆಗೇ ದಾಖಲಾಗಬೇಕು ಎನ್ನುವ ಅಗತ್ಯ ಇರುವುದಿಲ್ಲ. ಇದರಿಂದ ಸಕಾಲದಲ್ಲಿ ರೋಗಿಗಳಿಗೆ ಸೇವೆ ದೊರೆತು ಇನ್ನಷ್ಟು ಜನರ ಪ್ರಾಣ ಉಳಿಸಬಹುದು. ಜೊತೆಗೆ ರೋಗಿಗಳ ಸ್ಥಳಾಂತರ ಅವಧಿಯಲ್ಲೂ ಇವು ಪ್ರಾಣ ಉಳಿಸುತ್ತವೆ’ ಎನ್ನುತ್ತಾರೆ ರಾಜ್ಕುಮಾರ್.
‘ವಾಯು ಸಂಜೀವಿನಿ’ ಎಂಬ ಹೆಸರಿನ ಈ ಯೋಜನೆಯು ಮೂರು ದಿನದ ಹಿಂದೆ ಆರಂಭಗೊಂಡಿದ್ದು, ಈಗಾಗಲೇ ಇತರೇ ಆಸ್ಪತ್ರೆಗಳೂ ಇವರನ್ನು ಸಂಪರ್ಕಿಸಿವೆ. ಭವಿಷ್ಯದಲ್ಲಿ ಕೋವಿಡ್ ಮೂರನೇ ಅಲೆಯಿಂದ ಮಕ್ಕಳಿಗೆ ಅಪಾಯ ಇರುವಸಾಧ್ಯತೆ ಹಿನ್ನೆಲೆಯಲ್ಲಿ ಮಕ್ಕಳ ಆರೈಕೆಗೆಂದೇ ಕಾರ್ಪೋರೇಟ್ ಮಾದರಿಯಲ್ಲಿ ವಿಶೇಷ ಕೊಠಡಿ ನಿರ್ಮಿಸಲು ಯೋಜಿಸಿರುವುದಾಗಿಯೂ ಅವರು ಹೇಳುತ್ತಾರೆ.
ಆಸ್ಪತ್ರೆ ಆವರಣದಲ್ಲೇ ಆಮ್ಲಜನಕ ಯೋಜನೆ ರೂಪಿಸಿದ ಸರ್ಕಾರಿ ವೈದ್ಯ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.