ಭೋಪಾಲ್ : ಮಧ್ಯಪ್ರದೇಶದ ಆರು ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 3,000 ಕಿರಿಯ ವೈದ್ಯರು ಗುರುವಾರ ಸಾಮೂಹಿಕವಾಗಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಮಧ್ಯಪ್ರದೇಶ್ ಜೂನಿಯರ್ ಡಾಕ್ಟರ್ಸ್ ಅಸೋಸಿಯೇಷನ್(ಎಂಪಿಜೆಡಿಎ) ಅಧ್ಯಕ್ಷ ಡಾ. ಅರವಿಂದ್ ಮೀನ ತಿಳಿಸಿದ್ದಾರೆ.
ನಾಲ್ಕು ದಿನಗಳಿಂದ ನಡೆಯುತ್ತಿರುವ ಕಿರಿಯ ವೈದ್ಯರ ರಾಜ್ಯವ್ಯಾಪಿ ಸ್ಟ್ರೈಕ್ಅನ್ನು ಹೈಕೋರ್ಟ್ ಕಾನೂನುಬಾಹಿರ ಎಂದು ಘೋಷಿಸಿದ ಬೆನ್ನಲ್ಲೇ ಈ ಕ್ರಮಕ್ಕೆ ವೈದ್ಯರು ಮುಂದಾಗಿದ್ದಾರೆ.
ಸ್ಟೈಪೆಂಡ್ನಲ್ಲಿ ಶೇ. 24 ರಷ್ಟು ಏರಿಕೆ ಮತ್ತು ತಮಗೆ ಅಥವಾ ತಮ್ಮ ಕುಟುಂಬದವರಿಗೆ ಕರೊನಾ ಸೋಂಕು ತಗುಲಿದರೆ ಉಚಿತ ಚಿಕಿತ್ಸೆ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಕಿರಿಯ ವೈದ್ಯರು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ.
ಮೇ 6 ರಂದು ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದರೂ ಈವರೆಗೆ ಏನೂ ಕ್ರಮ ತೆಗೆದುಕೊಳ್ಳದ್ದರಿಂದ ಸ್ಟ್ರೈಕ್ ಕರೆಯಲಾಗಿದೆ ಎಂದು ಡಾ. ಮೀನ ಹೇಳಿದ್ದಾರೆ.
ಕರೊನಾ ಸಮಯದಲ್ಲಿ ಈ ತೆರನ ಸ್ಟ್ರೈಕ್ ಕಾನೂನುಬಾಹಿರವೆಂದು ಘೋಷಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಪ್ರತಿಭಟನಾನಿರತ ಕಿರಿಯ ವೈದ್ಯರಿಗೆ 24 ಗಂಟೆಗಳೊಳಗೆ ಅಂದರೆ ಇಂದು ಮಧ್ಯಾಹ್ನ 2.30 ರೊಳಗೆ ಕೆಲಸಕ್ಕೆ ಮರಳಬೇಕೆಂದು ನಿರ್ದೇಶಿಸಿದೆ. ಆದರೆ, ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಅಪೀಲು ಸಲ್ಲಿಸುವುದಾಗಿ ತಿಳಿಸಿರುವ ಜೆಡಿಎ, ಇತರ ರಾಜ್ಯಗಳ ವೈದ್ಯರ ಬೆಂಬಲವೂ ತಮಗಿದೆ ಎಂದಿದೆ.
ಮತ್ತೊಂದೆಡೆ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರು ಬಿಕ್ಕಟ್ಟನ್ನು ಬಗೆಹರಿಸಲು ಹಲವು ಜೆಡಿಎ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಕಿರಿಯ ವೈದ್ಯರ ಸ್ಟೈಪೆಂಡ್ನಲ್ಲಿ ಶೇ. 17 ರಷ್ಟು ಏರಿಕೆಯನ್ನು ಅನುಮೋದಿಸಿದ್ದು, ಶೀಘ್ರದಲ್ಲೇ ಈ ಕುರಿತು ಆದೇಶ ಹೊರಬೀಳಲಿದೆ ಎಂದು ವೈದ್ಯಕೀಯ ಶಿಕ್ಷಣ ಆಯುಕ್ತ ನಿಶಾಂತ್ ವಾರ್ವಡೆ ಭೋಪಾಲ್ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವೈದ್ಯರಿಗೂ ಎಸ್ಮಾ ಕಾಯ್ದೆ ಅನ್ವಯವಾಗುವುದರಿಂದ ಕೂಡಲೇ ರೋಗಿಗಳ ಚಿಕಿತ್ಸೆಗೆ ಹಿಂತಿರುಗುವ ನೈತಿಕ ನಿರ್ಧಾರ ಮಾಡಬೇಕೆಂದು ಆಗ್ರಹಿಸಿದ್ದಾರೆ.