ಅಮರಾವತಿ: ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದ ಕೆಲವು ಭಾಗಗಳಲ್ಲಿ ವಜ್ರ ಬೇಟೆ ಆರಂಭಗೊಂಡಿದ್ದು, ರೈತರೊಬ್ಬರಿಗೆ 2 ಕೋಟಿ ರೂಪಾಯಿ ಬೆಲೆಬಾಳುವ ವಜ್ರದ ಕಲ್ಲು ಸಿಕ್ಕಿದೆ ಎಂದು ವರದಿಯಾಗಿದೆ. ಈ ಕಾರಣದಿಂದ ರೈತರ ಜಮೀನುಗಳಿಗೆ ಚಿನ್ನದ ಬೆಲೆ ಬಂದಿದ್ದು, ಅನಂತಪುರ ಮತ್ತು ಕರ್ನೂಲು ಜಿಲ್ಲೆಗಳ ಗಡಿಯಲ್ಲಿರುವ ಗುಂತಕಲ್ ಮತ್ತು ಪತ್ತಿಕೊಂಡ ಭಾಗದ ನಡುವಿನ ಕೃಷಿ ಗದ್ದೆಗಳಲ್ಲಿ ಅಮೂಲ್ಯ ಕಲ್ಲುಗಳ ಬೇಟೆ ಆರಂಭವಾಗಿದೆ.
ತುಗ್ಗಲಿ ಮಂಡಲದ (ಬ್ಲಾಕ್) ಬಸಿನೆಪಲ್ಲಿಯ ರೈತರೊಬ್ಬರು ಖಾರಿಫ್ ಹಂಗಾಮಿನ ಕೃಷಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ವಜ್ರವೊಂದು ಪತ್ತೆಯಾಗಿತ್ತು. ಅವರು ವಜ್ರವನ್ನು 2 ಕೋಟಿ ರೂಪಾಯಿಗೆ ವ್ಯಾಪಾರಿಗೆ ಮಾರಾಟ ಮಾಡಿದ್ದಾರೆ ಎಂಬ ಸುದ್ದಿಗಳು ಹರಡಿವೆ. ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳ ಕೃಷಿ ಜಮೀನುಗಳು ಪ್ರತಿ ವರ್ಷ ಮಳೆಗಾಲದಲ್ಲಿ ವಜ್ರ ಬೇಟೆಗೆ ಹೆಸರುವಾಸಿಯಾಗಿದೆ.
ಸ್ಥಳೀಯ ಜನರು ಮತ್ತು ವಜ್ರದ ವ್ಯಾಪಾರಿಗಳು ಋತುವಿನ ಮೊದಲ ಮಳೆಗೆ ಮಣ್ಣಿನ ಮೇಲಿನ ಪದರವನ್ನು ಕೊಚ್ಚಿಕೊಂಡು ಹೋದಾಗ ಈ ವಜ್ರಗಳು ಮೇಲೆ ಬರುತ್ತವೆ ಎಂದು ನಂಬುತ್ತಾರೆ.
ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿಯೂ ಕೂಡ ರಾಯಲಸೀಮೆ ಅಮೂಲ್ಯವಾದ ಕಲ್ಲುಗಳು ಮತ್ತು ವಜ್ರಗಳ ವ್ಯಾಪಾರಕ್ಕೆ ಹೆಸರುವಾಸಿಯಾಗಿತ್ತು. ವಜ್ರಕರೂರು, ತುಗ್ಗಲಿ, ಜೊನ್ನಗಿರಿ, ಮಡ್ಡಿಕೇರಾ, ಪಗಿದಿರೈ, ಪೆರವಳಿ, ಮಹಾನದಿ, ಮಹದೇವಪುರಂ ಮುಂತಾದ ಪ್ರದೇಶಗಳು ವಜ್ರ ಬೇಟೆಗಾರರ ಪಾಲಿಗೆ ಅಚ್ಚುಮೆಚ್ಚಿನ ತಾಣಗಳಾಗಿ ಪರಿಣಮಿಸಿವೆ.
ತೆಲುಗು ರಾಜ್ಯಗಳ ವಿವಿಧ ಭಾಗಗಳಿಂದ ವಜ್ರ ಬೇಟೆಗಾರರು ಈ ಪ್ರದೇಶಕ್ಕೆ ಬರುತ್ತಾರೆ. ಅನಂತಪುರ ಜಿಲ್ಲೆಯ ಗೂಟಿ ಪಟ್ಟಣದ ಹೋಟೆಲ್ಗಳು ಮತ್ತು ಲಾಡ್ಜ್ಗಳು ಇದೇ ಕಾರಣದಿಂದ ಭರ್ತಿಯಾಗಿದ್ದು, ಮಳೆಗಾಲ ಆರಂಭವಾಗುವ ವೇಳೆಗೆ ಇನ್ನಷ್ಟು ಜನರಿಂದ ತುಂಬಲಿದೆ. ಕೆಲವು ಜನರು ಜೂನ್ ಮತ್ತು ಸೆಪ್ಟೆಂಬರ್ ನಡುವೆ ತೆರೆದ ಪ್ರದೇಶಗಳಲ್ಲಿ ತಾತ್ಕಾಲಿಕ ಟೆಂಟ್ಗಳಲ್ಲಿ ವಾಸಿಸಿ ವಜ್ರ ಅರಸುವ ಕಾಯಕದಲ್ಲಿ ತೊಡಗುತ್ತಾರೆ.
2021ರಲ್ಲಿ ಜೊನ್ನಗಿರಿ ಗ್ರಾಮದಲ್ಲಿ ಮೂವರು ವಜ್ರ ಬೇಟೆಗಾರರು 2.4 ಕೋಟಿ ಮೌಲ್ಯದ ಅಮೂಲ್ಯ ಕಲ್ಲುಗಳನ್ನು ಪತ್ತೆ ಮಾಡಿದ್ದರು. ಕಳೆದ ವರ್ಷ ರೈತರೊಬ್ಬರು ಸುಮಾರು 40 ಲಕ್ಷ ರೂ.ಗೆ ಬೆಲೆಬಾಳುವ ಕಲ್ಲನ್ನು ಮಾರಾಟ ಮಾಡಿದ್ದರು. ಮತ್ತೊಬ್ಬ ರೈತ 30 ಕ್ಯಾರೆಟ್ ವಜ್ರವನ್ನು 1.4 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.