ಪಾಟ್ನಾ, ಮೇ.19: ಪಿಕ್ ಅಪ್ ತಾತ್ಕಾಲಿಕ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಪಾಟ್ನಾದ ಹೊರವಲಯದ ಬಿಹ್ತಾ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪಿಕ್ ಅಪ್ ವ್ಯಾನ್ ನಲ್ಲಿದ್ದವರು ಗುರುವಾರ ತಡರಾತ್ರಿ ಮದುವೆ ಸಮಾರಂಭದ ನಂತರ ಬಿಹ್ತಾದಿಂದ ಹಿಂದಿರುಗುತ್ತಿದ್ದರು. ಘಟನೆಯಲ್ಲಿ ವಧುವಿನ 15 ವರ್ಷದ ಸಹೋದರ ಸಹ ಪ್ರಾಣ ಕಳೆದುಕೊಂಡಿದ್ದಾನೆ.
ಬಿಹ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ಪಥೋಲಿಯಾ ಒಡ್ಡಿನಲ್ಲಿ ಅಪಘಾತ ಸಂಭವಿಸಿದೆ ಎಂದು ಎಸ್ಎಚ್ಒ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ತಿಲಕ ಸಮಾರಂಭದ ನಂತರ ಜನರು ಮನೆಗೆ ಹಿಂದಿರುಗುತ್ತಿದ್ದಾಗ ವಾಹನದ ಚಾಲಕ ನಿಯಂತ್ರಣ ಕಳೆದುಕೊಂಡು ತಾತ್ಕಾಲಿಕ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾನೆ.
“ಕೆಲವು ಜನರು ವ್ಯಾನ್ ನ ಮೇಲ್ಛಾವಣಿಯ ಮೇಲೆ ಕುಳಿತಿದ್ದರು. ವಾಹನವು ತಡೆಗೋಡೆಗೆ ಡಿಕ್ಕಿ ಹೊಡೆದಾಗ, ಅವರು ಕೆಳಗೆ ಬಿದ್ದರು” ಎಂದು ಕುಮಾರ್ ಹೇಳಿದರು.
“ವಾಹನದ ಚಾಲಕ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಆತನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಅವರು ಹೇಳಿದರು.
“ಮಾಹಿತಿ ಪಡೆದ ತಂಡವು ತಕ್ಷಣ ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿತು. ವಿವೇಕ್ ಕುಮಾರ್ (40) ಸ್ಥಳದಲ್ಲೇ ಮೃತಪಟ್ಟರೆ, ನಟಕ್ ಮಹತೋ (40) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೂವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಕುಮಾರ್ ತಿಳಿಸಿದ್ದಾರೆ.
ಮೃತರು ಸರನ್ ಜಿಲ್ಲೆಯ ಡೋರಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ದಯಾಳ್ಚಕ್ ಗ್ರಾಮದವರು.