ಹೊಸದಿಲ್ಲಿ: ಕಳೆದ 7 ವರ್ಷಗಳಲ್ಲಿ 3 ಕೋಟಿ ಜನರಿಗೆ ಮನೆ ನೀಡಿದ್ದೇವೆ. ಬಡವರ ಮನೆ ನಿರ್ಮಾಣಕ್ಕೆ 48 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಇದು ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಬಜೆಟ್ ಆಗಿದೆ.
ಬಡವರಿಗೆ ಮನೆ ಸಿಕ್ಕರೆ ಅವರ ಜೀವನ ಬದಲಾಗುತ್ತದೆ. ಬಡವರ ಶಿಕ್ಷಣಕ್ಕಾಗಿ ನಾವು ಶ್ರಮಿಸಿದ್ದೇವೆ ಎಂದು ಕೇಂದ್ರ ಬಜೆಟ್ ಬಗ್ಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಬುಧವಾರ ನಡೆಸಿದ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಡವರಿಗೆ 80 ಲಕ್ಷ ಮನೆ ನಿರ್ಮಾಣವಾಗಲಿದೆ. 9 ಕೋಟಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಒದಗಿಸಿದ್ದೇವೆ, 7 ವರ್ಷಗಳಲ್ಲಿ ಜಿಡಿಪಿ ಹೆಚ್ಚಳವಾಗಿದೆ ಎಂದರು.
“ನೈಸರ್ಗಿಕ ಕೃಷಿ ಹಾಗೂ ರಾಸಾಯನಿಕ ಮುಕ್ತ ಕೃಷಿಗೆ ಪ್ರೋತ್ಸಾಹಿಸುತ್ತೇವೆ. ದೇಶದ ಕೃಷಿ ಕ್ಷೇತ್ರವನ್ನು ಹೈಟೆಕ್ ಮಾಡಲಾಗುತ್ತದೆ. ಕೃಷಿಗೆ ಸಾಕಷ್ಟು ಕೊಡುಗೆ ನೀಡಲಾಗಿದೆ. ರೈತರಿಗಾಗಿ ಡ್ರೋನ್ ಟೆಕ್ನಾಲಜಿ ಬಳಕೆ ಮಾಡಲಾಗುತ್ತಿದೆ. ಗಂಗಾ ನದಿ ತಟದಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿ ಕೃಷಿ ಮಾಡಲಾಗುತ್ತದೆ. 4 ರಾಜ್ಯಗಳಲ್ಲಿ ಸಾವಯವ ಕೃಷಿ ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ. ಕೃಷಿಯನ್ನು ಆಧುನೀಕರಣಗೊಳಿಸುವ ಅಗತ್ಯವಿದೆ” ಎಂದರು.