ನವದೆಹಲಿ : ಹಿಜಾಬ್ ಧರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ನೀಡಿರುವ ಆದೇಶ ಕಾನೂನುಬದ್ಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಾ.15ರಂದು ತೀರ್ಪು ನೀಡುತ್ತಿದ್ದಂತೆಯೇ ಈ ತೀರ್ಪನ್ನು ಪ್ರಶ್ನಿಸಿ ಹಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಅದರ ತುರ್ತು ವಿಚಾರಣೆಗೆ ಸುಪ್ರೀಂ ಮತ್ತೊಮ್ಮೆ ನಿರಾಕರಿಸಿದೆ.
ಹಿಜಾಬ್ ಧರಿಸಿವುದು ಮುಸ್ಲಿಂ ಮಹಿಳೆಯರ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೈಕೋರ್ಟ್ ಹೇಳಿದೆ. ಈ ಕುರಿತು ಸರ್ಕಾರ ನೀಡಿದ ಆದೇಶ ಕಾನೂನುಬದ್ಧವಾಗಿದೆ. ಫೆಬ್ರವರಿ 5ರಂದು ಸರ್ಕಾರ ನೀಡಿದ ಆದೇಶವನ್ನು ಅಮಾನ್ಯಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಇದನ್ನು ಸುಪ್ರೀಂಕೋರ್ಟ್ನಲ್ಲಿ ವಿದ್ಯಾರ್ಥಿನಿಯರು ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ.
ಇದರ ವಿಚಾರಣೆ ತುರ್ತಾಗಿ ನಡೆಯಬೇಕಿರುವ ಹಿನ್ನೆಲೆಯಲ್ಲಿ, ಕೂಡಲೇ ವಿಚಾರಣೆ ನಡೆಸಿ ಎಂದು ಮೇಲ್ಮನವಿದಾರರ ಪರ ವಕೀಲರು ಸುಪ್ರೀಂಕೋರ್ಟ್ ಅನ್ನು ಈ ಹಿಂದೆ ಕೋರಿದ್ದರು. ಆದರೆ ಸುಪ್ರೀಂಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಲು ತಿರಸ್ಕರಿಸಿದ್ದು, ಹೋಳಿ ಹಬ್ಬ ಮುಗಿದ ಮೇಲೆ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠ ಹೇಳಿತ್ತು. ಇಂದು ಅದರ ವಿಚಾರಣೆ ಮತ್ತೆ ಕೋರ್ಟ್ ಮುಂದೆ ಬಂದಿತ್ತು.
ಪುನಃ ವಕೀಲರು ಪರೀಕ್ಷೆಯ ಕಾರಣ ಕೊಟ್ಟರು. ಪರೀಕ್ಷೆಗಳು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಶಾಲೆಗಳಿಗೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ. ಅವರ ಒಂದು ವರ್ಷ ವ್ಯರ್ಥವಾಗುತ್ತಿದೆ. ಆದುದರಿಂದ ತುರ್ತಾಗಿ ವಿಚಾರಣೆ ನಡೆಸಿ ಎಂದು ವಕೀಲ ದೇವದತ್ ಕಾಮತ್ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ‘ಇದಕ್ಕೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಸಮಸ್ಯೆಯನ್ನು ಸೂಕ್ಷ್ಮಗೊಳಿಸಬೇಡಿ’ ಎಂದು ಹೇಳಿದರಲ್ಲದೆ ‘ಮುಂದಿನ ಪ್ರಕರಣದ ಕಡೆ ನಡೆಯಿರಿ’ ಎಂದು ಹೇಳುವ ಮೂಲಕ ತುರ್ತು ಅರ್ಜಿಯ ವಿಚಾರಣೆ ಇಲ್ಲ ಎಂಬ ಸಂಗತಿಯನ್ನು ಪರೋಕ್ಷವಾಗಿ ತಿಳಿಸಿದರು.
ಈ ನಡುವೆಯೇ ಹಿಂದೂ ಸೇನಾದ ಅಧ್ಯಕ್ಷ ಸುರ್ಜಿತ್ ಯಾದವ್ ಅವರು ಸುಪ್ರೀಂಕೋರ್ಟ್ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸುವ ಪೂರ್ವದಲ್ಲಿ ತಮ್ಮ ವಾದವನ್ನೂ ಆಲಿಸಬೇಕು ಎಂದು ಅವರು ಕೋರಿದ್ದಾರೆ.