ಕೆಲಸ ಮುಗಿಸಿ ಮಧ್ಯರಾತ್ರಿ 10 ಕಿಲೋ ಮೀಟರ್ ಓಡುತ್ತಲೇ ಮನೆ ಸೇರುವ 19 ವರ್ಷದ ಯುವಕ ಪ್ರದೀಪ್ ಮೆಹ್ರಾನ ವಿಡಿಯೋ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಎಲ್ಲೆಡೆ ಆತನ ಕನಸಿನ ಓಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ಪ್ರದೀಪ್ ಮೆಹ್ರಾ ತಾಯಿಗೆ ದೆಹಲಿ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಘೋಷಿಸಿದೆ.
ಭಾರತೀಯ ಸೇನೆ ಸೇರುವ ಉದ್ದೇಶದಿಂದ ಯುವಕ ಪ್ರತಿದಿನ 10 ಕಿಲೋ ಮೀಟರ್ ಓಡುತ್ತಲೇ ತನ್ನ ಮನೆ ಸೇರಿಕೊಳ್ಳುತ್ತಿದ್ದ. ಈತನ ತಾಯಿ ಅನಾರೋಗ್ಯಪೀಡಿತರಾಗಿದ್ದು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಖುದ್ದಾಗಿ ಆತನೇ ವಿಡಿಯೋದಲ್ಲಿ ಹೇಳಿಕೊಂಡಿದ್ದ. ಇದೀಗ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಸಹಾಯಹಸ್ತ ಚಾಚಿದ್ದು, ಉಚಿತವಾಗಿ ಚಿಕಿತ್ಸೆ ನೀಡುವ ಭರವಸೆ ನೀಡಿದೆ.
ಈಗಾಗಲೇ ಭಾರತೀಯ ಸೇನೆ ಸೇರಲು ಮುಂದಾಗಿರುವ ಪ್ರದೀಪ್ಗೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ, ಭಾರತೀಯ ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಕಲ ರೀತಿಯಿಂದಲೂ ತಾವು ಸಹಾಯ ಮಾಡುವುದಾಗಿ ನಿನ್ನೆ ಪ್ರಕಟಿಸಿದ್ದರು.
ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಣಾ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ತಮ್ಮ ರೆಜಿಮೆಂಟ್ನಲ್ಲಿ ನೇಮಕಾತಿ ಮಾಡಿಕೊಳ್ಳಲು ತರಬೇತಿ ನೀಡುವುದಾಗಿ ತಿಳಿಸಿದ್ದಾಗಿ ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.