ನವದೆಹಲಿ: ಮೋದಿ ಸರ್ಕಾರವು ರಾಷ್ಟ್ರದ ಎಲ್ಲ ವರ್ಗದ ಜನರ ಅಭಿವೃದ್ಧಿ ಕೈಗೊಳ್ಳಲು ಮತ್ತು ಹಕ್ಕುಗಳನ್ನು ಕಾಯ್ದುಕೊಳ್ಳಲು ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಸಂವಿಧಾನ ದಿನದ ಅಂಗವಾಗಿ ಹೇಳಿಕೆ ನೀಡಿರುವ ಅವರು, ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯ ಆತ್ಮ ಇದ್ದ ಹಾಗೆ ಮತ್ತು ರಾಷ್ಟ್ರದ ಏಕತೆ ಹಾಗೂ ಪ್ರಗತಿಗೆ ಆಧಾರವಿದ್ದಂತೆ ಎಂದು ಬಣ್ಣಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾರ್ಗದರ್ಶನವನ್ನು ಕೇಂದ್ರ ಸರ್ಕಾರ ಅನುಸರಿಸುತ್ತದೆ ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.
ಮೋದಿ ಶುಭಾಶಯ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದೇಶದ ಜನತೆಗೆ ಸಂವಿಧಾನ ದಿನದ ಶುಭಾಶಯ ಕೋರಿದ್ದಾರೆ.ಸಾಂವಿಧಾನಿಕ ಸಭೆಯಲ್ಲಿ 1948ರ ನವೆಂಬರ್ 4ರಂದು ಕರಡು ಮಸೂದೆಯನ್ನು ಮಂಡಿಸಿ ಅಂಬೇಡ್ಕರ್ ಅವರು ಮಾಡಿದ ಭಾಷಣದ ಭಾಗವನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
1949ರ ನವೆಂಬರ್ 26ರಂದು ಸಂವಿಧಾನವು ಅಂಗೀಕಾರವಾದ ಪ್ರಯುಕ್ತ ಈ ದಿನವನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ.