ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ನಡುವೆ ಮೈತ್ರಿ ಮಾತುಕತೆಗಳು ನಡೆಯುತ್ತಿವೆ. ಆದರೆ ಹಳೇ ಮೈಸೂರು ಭಾಗದ ಮಂಡ್ಯದಲ್ಲಿ ದಳಪತಿಗಳಿಗೆ ಸೆಡ್ಡು ಹೊಡೆದು ಚುನಾವಣೆ ಗೆದ್ದಿದ್ದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಈ ಮೈತ್ರಿ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ.
ಸ್ವತಂತ್ರ ಅಭ್ಯರ್ಥಿಯಾಗಿದ್ದರೂ ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಆದರೆ ಜೆಡಿಎಸ್ ಮಂಡ್ಯ ಲೋಕಸಭೆ ಕ್ಷೇತ್ರವನ್ನು ತನಗೆ ನೀಡುವಂತೆ ಬಿಜೆಪಿಗೆ ಷರತ್ತು ಹಾಕಿದ್ದು, ಬಿಜೆಪಿ ಜೆಡಿಎಸ್ ಗೆ ಮಂಡ್ಯವನ್ನು ಬಿಟ್ಟುಕೊಟ್ಟಲ್ಲಿ ಸುಮಲತಾ ಅವರ ಸ್ಥಾನಮಾನವೇನು ಎಂಬ ಪ್ರಶ್ನೆ ಎದುರಾಗಿದೆ. ಈ ವಿಚಾರಗಳ ಮಧ್ಯೆ ಸಂಸದೆ ಸುಮಲತಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಭೇಟಿ ಕುರಿತು ಸುಮಲತಾ ಮಾತನಾಡಿದ್ದು ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ 73ನೇ ಜನ್ಮ ದಿನದ ಶುಭಾಶಯಗಳನ್ನು ಹೇಳಿದೆ. ಮತ್ತು ಇತ್ತೀಚೆಗಷ್ಟೇ ನಡೆದ G20 ಶೃಂಗಸಭೆಯ ಯಶಸ್ಸಿಗೆ ಅಭಿನಂದನೆಗಳನ್ನು ತಿಳಿಸಿದೆ. ಈ ಸಂದರ್ಭದಲ್ಲಿ ನನ್ನ ಕ್ಷೇತ್ರ ಮಂಡ್ಯ ಮತ್ತು ಕರ್ನಾಟಕದ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅದಕ್ಕೆ ಸಂಬಂಧಿಸಿದ ಅನೇಕ ಸಲಹೆ ಸಹಕಾರವನ್ನು ಮಾನ್ಯ ಪ್ರಧಾನ ಮಂತ್ರಿಗಳು ನೀಡಿದರು.
ಸಾಕಷ್ಟು ಒತ್ತಡ ಮತ್ತು ಬಿಡುವಿಲ್ಲದ ಕೆಲಸಗಳ ನಡುವೆಯೂ ಕಡಿಮೆ ಸಮಯದಲ್ಲಿ ನನ್ನ ಭೇಟಿಗೆ ಅವಕಾಶ ನೀಡಿದ ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಿಮ್ಮ ಕಠಿಣ ಪರಿಶ್ರಮ ಮತ್ತು ದೇಶದ ಬಗೆಗಿನ ದೂರದೃಷ್ಟಿ ಯಾವಾಗಲೂ ನಮಗೆ ಸ್ಫೂರ್ತಿ ಹಾಗೂ ಮಾದರಿ ಎಂದು ಹೇಳಿಕೊಂಡಿದ್ದಾರೆ.