ನವದೆಹಲಿ: ಈ ಹಿಂದೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಪ್ರವೀಣ್ ಸೂದ್ ಸಿಬಿಐ ಹೊಸ ನಿರ್ದೇಶಕರಾಗಿ ಗುರುವಾರ ಅಧಿಕಾರ ವಹಿಸಿಕೊಂಡರು. 1986ರ ಬ್ಯಾಚ್ನ ಕರ್ನಾಟಕ ಕೇಡರ್ ಅಧಿಕಾರಿ ಸೂದ್ ಅವರು ಗುರುವಾರ ಜೈಸ್ವಾಲ್ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಸೂದ್ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಎರಡು ವರ್ಷಗಳ ಕಾಲದ ಅವಧಿ ಹೊಂದಿದ್ದಾರೆ. ಆದರೆ ಇದನ್ನು ಐದು ವರ್ಷಗಳ ಕಾಲ ವಿಸ್ತರಿಸಲು ಅವಕಾಶವಿದೆ. ಸೂದ್ ಅವರ ಹೆಸರನ್ನು ಅಂತಿಮಗೊಳಿಸಿದ ತ್ರಿಸದಸ್ಯ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಇದ್ದರು. ಸೂದ್ ಹೆಸರಲ್ಲದೆ ಮಧ್ಯಪ್ರದೇಶದ ಡಿಜಿಪಿ ಸುಧೀರ್ ಕುಮಾರ್ ಸಕ್ಸೇನಾ, ಗೃಹ ರಕ್ಷಕ ದಳದ ಮಹಾನಿರ್ದೇಶಕ ತಾಜ್ ಹಾಸನ್ ಅವರ ಹೆಸರು ಶಾರ್ಟ್ಲಿಸ್ಟ್ ಆಗಿತ್ತು.
ಸೂದ್ 1986ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಮುಖ ಸೈಬರ್ ಕ್ರೈಮ್ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಅವರ ಪರಿಣತಿ ಹೊಂದಿದ್ದಾರೆ. ಕರ್ನಾಟಕದಲ್ಲಿ, ಸೈಬರ್ ವಂಚನೆ ಎದುರಿಸಲು ಸೂದ್ ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಮತ್ತು ಸಿಸ್ಟಮ್ಸ್ ಜಾರಿಗೆ ತಂದ್ದರು. ಅಲ್ಲದೆ ರಾಷ್ಟ್ರಪತಿಗಳ ಪೊಲೀಸ್ ಪದಕದ ಗೌರವಕ್ಕೆ ಪಾತ್ರರಾಗಿದ್ದು, ಮಾರಿಷಸ್ ಸರ್ಕಾರದ ಪೊಲೀಸ್ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಸಿಬಿಐ ನಿರ್ದೇಶಕರ ಹುದ್ದೆಗೆ ಪರಿಗಣಿಸಲು ಮೂರು ಹಿರಿಯ ಬ್ಯಾಚ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ನಂತರ ಹೆಸರುಗಳನ್ನು ಪ್ರಧಾನ ಮಂತ್ರಿ ನೇತೃತ್ವದ ಕ್ಯಾಬಿನೆಟ್ನ ಇಬ್ಬರು ಸದಸ್ಯರ ನೇಮಕಾತಿ ಸಮಿತಿಗೆ ಕಳುಹಿಸಲಾಗುತ್ತದೆ, ಅದು ಒಬ್ಬರನ್ನು ಆಯ್ಕೆ ಮಾಡುತ್ತದೆ. ಗೃಹ ಸಚಿವ ಅಮಿತ್ ಶಾ ಅವರು ಸಮಿತಿಯ ಎರಡನೇ ಸದಸ್ಯರಾಗಿದ್ದಾರೆ.