ನವದೆಹಲಿ: ಸುದೀಪೊ ಸೇನ್ ನಿರ್ದೇಶನದ “ದ ಕೇರಳ ಸ್ಟೋರಿ’ ಶುಕ್ರವಾರ (ಮೇ 5) ಬಿಡುಗಡೆಯಾಗಲಿದೆ. ಚಿತ್ರಕ್ಕೆ ಎ ಪ್ರಮಾಣಪತ್ರವನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿತು.
ಈ ಕುರಿತ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಲು ಕೇರಳ ಉಚ್ಚ ನ್ಯಾಯಾಲಯಕ್ಕೆ ಆದೇಶಿಸಬೇಕೆಂಬ ಮನವಿಯನ್ನೂ ನಿರಾಕರಿಸಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, “ಈಗಾಗಲೇ ಸಿಬಿಎಫ್ಸಿ ಪ್ರಮಾಣಪತ್ರ ನೀಡಿದೆ.
ನೀವು ಸಿನೆಮಾದ ನಟ, ನಟಿಯರು, ನಿರ್ಮಾಪಕರ ಬಗ್ಗೆ ಯೋಚಿಸಬೇಕು. ಇದಕ್ಕಾಗಿ ಅವರು ತಮ್ಮ ಶ್ರಮವನ್ನು ಹಾಕಿರುತ್ತಾರೆ. ಒಂದು ಚಿತ್ರಕ್ಕೆ ತಡೆ ತರುವ ಯೋಚನೆ ಮಾಡುವ ಮುನ್ನ ನೀವು ಜಾಗರೂಕವಾಗಿ ಯೋಚಿಸಬೇಕು. ಸಿನೆಮಾ ಚೆನ್ನಾಗಿ ಇಲ್ಲದಿದ್ದರೆ ಮಾರುಕಟ್ಟೆಯೇ ಇದನ್ನು ನಿರ್ಧರಿಸುತ್ತದೆ. ನಾವು ಇದನ್ನು ನಿರ್ಧರಿಸುವುದಿಲ್ಲ,’ ಎಂದು ಹೇಳಿತು. ಜಮೀಯತ್ ಉಲೇಮಾ-ಎ-ಹಿಂದ್ ಸಹಿತ ಕೆಲವು ಸಂಘಟನೆಗಳು ಸಿನೆಮಾ ಬಿಡುಗಡೆಗೆ ತಡೆಕೋರಿ ಅರ್ಜಿ ಸಲ್ಲಿಸಿದ್ದವು.