ನವದೆಹಲಿ: ಕಾಂಬೋಡಿಯಾದ ರಾಜ ನೊರೊಡೊಮ್ ಸಿಹಾಮೊನಿ ಅವರು ಭಾರತಕ್ಕೆ ತಮ್ಮ ಚೊಚ್ಚಲ ರಾಜ್ಯ ಭೇಟಿಗಾಗಿ ಸೋಮವಾರ ನವದೆಹಲಿಗೆ ಆಗಮಿಸಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜ್ಕುಮಾರ್ ರಂಜನ್ ಸಿಂಗ್ ಸ್ವಾಗತಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಭಾರತ ಮತ್ತು ಕಾಂಬೋಡಿಯಾ ನಡುವಿನ ನಾಗರಿಕ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸಲು ಇದು ಒಂದು ಅವಕಾಶ” ಎಂದು ಹೇಳಿದ್ದಾರೆ. ಕಾಂಬೋಡಿಯಾದ ರಾಜ ಸಿಹಾಮೋನಿ ಮೂರು ದಿನಗಳ ಭಾರತದಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. 1963ರಲ್ಲಿ ಕಾಂಬೋಡಿಯಾದ ಅಂದಿನ ರಾಜ (ಸಿಹಾಮೋನಿ ಅವರ ತಂದೆ) ಭಾರತಕ್ಕೆ ಭೇಟಿ ನೀಡಿದ್ದರು.
ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಸಿಹಾಮೋನಿಗೆ ವಿಧ್ಯುಕ್ತ ಸ್ವಾಗತವನ್ನು ನೀಡಲಾಗುವುದು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಔತಣ ಕೂಟವನ್ನು ಆಯೋಜಿಸಿದ್ದಾರೆ. ರಾಷ್ಟ್ರಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಸಿಹಾಮೋನಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ರಾಜ್ ಘಾಟ್ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.