ನವದೆಹಲಿ: ಸಂಸತ್ ಕಟ್ಟಡವು ಭಾರತದ ಪ್ರಗತಿಯ ಪ್ರತೀಕವಾಗಿದ್ದು, ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಐಕಾನಿಕ್ ಕಟ್ಟಡವು ಸಬಲೀಕರಣದ ತೊಟ್ಟಿಲು ಆಗಲಿ. ಕನಸುಗಳನ್ನು ಪೋಷಿಸಿ ನೀರೆರದು ಅದನ್ನು ಪ್ರಗತಿಯ ಉತ್ತುಂಗಕ್ಕೆ ಕೊಂಡೊಯ್ಯಲಿ ಎಂದು ಉಲ್ಲೇಖಿಸಿದ್ದರು. ಅದೇರೀತಿ ಸಂಸತ್ ಕಟ್ಟಡಕ್ಕೆ ದೇಶದ ವಿವಿಧ ಭಾಗಗಳಿಂದ ಮೂಲ ವಸ್ತುಗಳನ್ನು ಪಡೆದಿರುವುದು ವಿಶಿಷ್ಟವಾಗಿದೆ.
ಉದಯಪುರದ ಕೆಂಪು ಗ್ರಾನೈಟ್, ದಿಯು, ದಮನ್ನಿಂದ ಉಕ್ಕು: ಉತ್ತರ ಪ್ರದೇಶದ ಮಿರ್ಜಾಪುರದಿಂದ ಕಾರ್ಪೆಟ್ಗಳು, ತ್ರಿಪುರಾದಿಂದ ಬಿದಿರು ನೆಲಹಾಸು ಮತ್ತು ರಾಜಸ್ಥಾನದಿಂದ ಕಲ್ಲಿನ ಕೆತ್ತನೆಗಳನ್ನು ಪಡೆಯಲಾಗಿದೆ. ಕಟ್ಟಡದಲ್ಲಿ ಬಳಸಲಾದ ತೇಗದ ಮರವನ್ನು ಮಹಾರಾಷ್ಟ್ರದ ನಾಗ್ಪುರದಿಂದ ಪಡೆಯಲಾಗಿದ್ದು, ಕೆಂಪು ಮತ್ತು ಬಿಳಿ ಮರಳುಗಲ್ಲನ್ನು ರಾಜಸ್ಥಾನದ ಸರ್ಮಥುರಾದಿಂದ ಸಂಗ್ರಹಿಸಲಾಗಿದೆ. ರಾಷ್ಟ್ರೀಯ ರಾಜಧಾನಿಯಲ್ಲಿರುವ ಕೆಂಪು ಕೋಟೆ ಮತ್ತು ಹುಮಾಯೂನ್ ಸಮಾಧಿಯ ಮರಳುಗಲ್ಲುಗಳು ಕೂಡಾ ಸರ್ಮಥುರಾ ಮೂಲದ್ದಾಗಿದೆ. ಕೇಶರಿಯಾ ಹಸಿರು ಕಲ್ಲನ್ನು ಉದಯಪುರದಿಂದ, ಕೆಂಪು ಗ್ರಾನೈಟ್ ಅನ್ನು ಅಜ್ಮೀರ್ ಬಳಿಯ ಲಾಖಾದಿಂದ ಮತ್ತು ಬಿಳಿ ಅಮೃತಶಿಲೆಯನ್ನು ರಾಜಸ್ಥಾನದ ಅಂಬಾಜಿಯಿಂದ ಪಡೆಯಲಾಗಿದೆ.
ಲೋಕಸಭೆ ಮತ್ತು ರಾಜ್ಯಸಭಾ ಕೊಠಡಿಗಳಲ್ಲಿನ ಫಾಲ್ಸ್ ಸೀಲಿಂಗ್ಗಳಿಗೆ ಉಕ್ಕಿನ ರಚನೆಯನ್ನು ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ದಿಯುನಿಂದ ಪಡೆಯಲಾಗಿದ್ದು, ಹೊಸ ಕಟ್ಟಡದಲ್ಲಿನ ಪೀಠೋಪಕರಣಗಳನ್ನು ಮುಂಬೈನಲ್ಲಿ ರಚಿಸಲಾಗಿದೆ. ಕಟ್ಟಡವನ್ನು ಆವರಿಸಿರುವ ಕಲ್ಲಿನ ‘ಜಾಲಿ’ (ಲ್ಯಾಟಿಸ್) ಕೆಲಸಗಳನ್ನು ರಾಜಸ್ಥಾನದ ರಾಜನಗರ ಮತ್ತು ಉತ್ತರ ಪ್ರದೇಶದ ನೋಯ್ಡಾದಿಂದ ಪಡೆಯಲಾಗಿದೆ.
980 ಕೋಟಿ ರೂ. ವೆಚ್ಚ: ನೂತನ ಸಂಸತ್ ಭವನವನ್ನು 950 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 64500 ಚದರ ಅಡಿ ವಿಸ್ತೀರ್ಣದಲ್ಲಿ ಇದರ ನಿರ್ಮಾಣವಾಗಿದೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಒಟ್ಟು 950 ಕೊಠಡಿಗಳನ್ನು ನಿರ್ಮಿಸಲಾಗಿದೆ.