ಪಣಜಿ: ಮಹದಾಯಿ ನದಿ ರಕ್ಷಣೆಗೆ ಉತ್ತರ ಗೋವಾದ ಮಿರ್ಮಾಮರ್ ಮತ್ತು ಕಾರಂಜಾಲೆಮ್ ಬೀಚ್ನಲ್ಲಿ ಶನಿವಾರ ಮಾನವ ಸರಪಳಿ ನಿರ್ಮಿಸಿ ನದಿ ರಕ್ಷಣೆಗೆ ಜಾಗೃತಿ ಮೂಡಿಸಿದರು.
ನದಿ ಕುರಿತು ಹಾಡು ರಚಿಸಿ ಹಾಡಿದರು. ಅಲ್ಲದೆ ಗೋವಾದ ಜೀವನಾಡಿಯಾಗಿರುವ ನದಿಯನ್ನು ರಕ್ಷಿಸುವಂತೆ ಘೋಷಣೆಗಳನ್ನು ಕೂಗಿದರು. ಅಭಿಯಾನದ ಸಂಚಾಲಕ ಇತಿಹಾಸ ತಜ್ಞ ಪ್ರಜಾಲ್ ಸಖರ್ದಂಡೆ ಮಾತನಾಡಿ, ಮಹದಾಯಿ ನದಿ ಸಮಸ್ಯೆ ಕುರಿತು ಜಾಗೃತಿ ಮೂಡಿಸಲು ಮಾನವ ಸರಪಳಿ ರಚಿಸಲಾಗಿದೆ ಎಂದರು. ‘ಗೋವಾ ಹೆರಿಟೇಜ್ ಆಕ್ಷನ್ ಗ್ರೂಪ್’ ಮತ್ತು ‘ಸೇವ್ ಮಹದೇಯ್ ಸೇವ್ ಗೋವಾ ಫ್ರಂಟ್’ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗೋವಾ ಫಾರ್ವರ್ಡ್ ಪಾರ್ಟಿ ಶಾಸಕ ವಿಜಯ ಸರ್ದೇಸಾಯಿ ಮಾತನಾಡಿ, ಇದು ಗೋವಾದ ಗೌರವ, ಹೆಮ್ಮೆ ಮತ್ತು ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ ಎಂದರು. ಕಾಂಗ್ರೆಸ್ ಯಾವಾಗಲೂ ಗೋವಾದ ಹಿತಕಾಯಲು ಬದ್ಧವಾಗಿದೆ ಎಂದು ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ ಹೇಳಿದ್ದಾರೆ.