ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಲಸೆ ಕಾರ್ಮಿಕರನ್ನು ಗುರಿಯಾಗಿರಿಸಿ ಉಗ್ರರ ದಾಳಿ ಮುಂದುವರಿದಿದೆ. ಈ ಹಿನ್ನಲೆಯಲ್ಲಿ ವಲಸಿಗರನ್ನು ಭದ್ರತಾ ಪಡೆಗಳ ಶಿಬಿರಗಳಿಗೆ ಸ್ಥಳಾಂತರಿಸುವಂತೆ ತುರ್ತು ಆದೇಶ ನೀಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಕಣಿವೆ ರಾಜ್ಯದ ಪೊಲೀಸರು ನಿರಾಕರಿಸಿದ್ದಾರೆ.
ಅದೇ ರೀತಿ ಸ್ಥಳೀಯರಲ್ಲದವರು ಪೊಲೀಸ್ ಠಾಣೆಗಳಿಗೆ ಬರಬೇಕೆಂದು ಸೂಚಿಸಲಾಗಿದೆ ಎಂದೂ ವರದಿಯಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಶ್ಮೀರ ಐಜಿಪಿ ವಿಜಯ್ ಕುಮಾರ್, ‘ಅಂತಹ ಯಾವುದೇ ಆದೇಶ ಹೊರಡಿಸಿಲ್ಲ. ಇದು ಸುಳ್ಳು ಸುದ್ದಿʼ ಎಂದು ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 5ರಂದು ಶ್ರೀನಗರದ ಪ್ರಮುಖ ಔಷಧ ಅಂಗಡಿ ಮಾಲೀಕ ಮಖಾನ್ ಲಾಲ್ ಬಿಂದ್ರೂ ಎನ್ನುವವರನ್ನು ಉಗ್ರರು ಹತ್ಯೆ ಮಾಡಿದ್ದರು. ಅದಾದ ನಂತರ ಕಣಿವೆ ರಾಜ್ಯದಾದ್ಯಂತ ಉಗ್ರರು ವಲಸಿಗರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ.