ಭೋಪಾಲ್: ಉಜ್ಜಯಿನಿಯ ‘ಮಹಾಕಲ್ ಲೋಕ’ ಕಾರಿಡಾರ್ನಲ್ಲಿ ಸ್ಥಾಪಿಸಲಾದ ಏಳು ಸಪ್ತರ್ಷಿ ಪ್ರತಿಮೆಗಳು ಭಾರಿ ಗಾಳಿಗೆ ಕೆಳಗುರುಳಿವೆ. ಈ ಪ್ರದೇಶದಲ್ಲಿ ಭಾನುವಾರ 65 ಕಿ.ಮೀ ವೇಗದ ವೇಗದ ಗಾಳಿ, ಮಳೆ, ಗುಡುಗು ಕಾಣಿಸಿಕೊಂಡಿದ್ದು, ಪ್ರಾಕೃತಿಕ ವಿಕೋಪದಿಂದ ಪ್ರತಿಮೆಗಳು ಕೆಳಗುರುಳಿವೆ.
ಭಾರಿ ಬಿರುಗಾಳಿಗೆ ಸಹಿತ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬೃಹತ್ ಮೂರ್ತಿಗಳು ಪತನಗೊಂಡ ನಂತರ, ಆವರಣದಲ್ಲಿ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
856 ಕೋಟಿ ರೂಪಾಯಿಗಳ (ಎರಡು ಹಂತದ ಯೋಜನೆಯ ಒಟ್ಟು ವೆಚ್ಚ) ‘ಮಹಾಕಲ್ ಲೋಕ’ ಕಾರಿಡಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 11, 2022 ರಂದು ಅನಾವರಣಗೊಳಿಸಿದ್ದರು. ಯೋಜನೆಯ ಎರಡನೇ ಹಂತವು 2024 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮಧ್ಯಪ್ರದೇಶ ಸರ್ಕಾರ ತಿಳಿಸಿದೆ.
ರಾಜ್ಯ ಕಾಂಗ್ರೆಸ್ ನಾಯಕತ್ವವು ಪ್ರತಿಮೆಗಳ ಕುಸಿದಿರುವ ಬಗ್ಗೆ ಪ್ರಶ್ನೆ ಎತ್ತಿದ್ದು, ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವು ಮಹಾಕಾಲ್ ಲೋಕ ಕಾರಿಡಾರ್ ಅಭಿವೃದ್ಧಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿದ್ದು, ತನಿಖೆಗೆ ಒತ್ತಾಯಿಸಿದೆ. ಪ್ರತಿಮೆಗಳನ್ನು ಸ್ಥಾಪಿಸಿ ಒಂದು ವರ್ಷದೊಳಗೆ ಪತನಗೊಂಡಿರುವ ಕುರಿತು ಸತ್ಯ ಅರಿಯಲು ವಿರೋಧ ಪಕ್ಷವು ಪಕ್ಷದ ಹಿರಿಯ ನಾಯಕರ ಏಳು ಸದಸ್ಯರ ಸಮಿತಿಯನ್ನು ರಚಿಸಿದೆ.