ನಾಗಾಲ್ಯಾಂಡ್ನ ಮೋನ್ ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಓರ್ವ ಯೋಧ ಸೇರಿದಂತೆ 13 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.
ಕಲ್ಲಿದ್ದಲು ಗಣಿಗಾರಿಕೆ ಪ್ರದೇಶವಾದ ತಿರು ಮತ್ತು ಓಟಿಂಗ್ ಗ್ರಾಮ ನಡುವೆ ಈ ಘಟನೆ ನಡೆದಿದೆ. ಓಟಿಂಗ್ ಗ್ರಾಮದ ಜನರು ಒಂದು ಪಿಕ್ ಅಪ್ ಮಿನಿ ಟ್ರಕ್ ಮೂಲಕ ಮನೆಗೆ ವಾಪಸ್ ಬರುತ್ತಿದ್ದ ವೇಳೆ ತಿರು ಗ್ರಾಮದ ಬಳಿ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಟ್ರಕ್ ನಲ್ಲಿದ್ದವರೆಲ್ಲ ಮೃತಪಟ್ಟಿದ್ದಾರೆ.
ಇದರಿಂದ ಆಕ್ರೋಶಗೊಂಡ ಸ್ಥಳೀಯರು ಭದ್ರತಾ ಪಡೆಯ ಎರಡು ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಆದರೆ ಗುಂಡಿನ ದಾಳಿ ನಡೆಸಿದ್ದು ಯಾರೆಂಬುದರ ಬಗ್ಗೆ ನಿಖರ ಕಾರಣ ತಿಳಿದಿಲ್ಲ. ತನಿಖೆ ನಡೆಯುತ್ತಿದೆ.
“ನಾಗಾಲ್ಯಾಂಡ್ನ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ (ಖಪ್ಲಾಂಗ್-ಯುಂಗ್ ಆಂಗ್) ಸದಸ್ಯರು ಎಂದು ತಪ್ಪಾಗಿ ಭಾವಿಸಿ ನಾಗರೀಕರ ಮೇಲೆ ಈ ದಾಳಿ ನಡೆದಿದೆ” ಎಂದು ಸ್ಥಳೀಯರು ಹೇಳಿದ್ದಾರೆ.
ನಾಗಾಲ್ಯಾಂಡ್ನ ಮುಖ್ಯಮಂತ್ರಿ ನಿಫಿಯು ರಿಯೊ ಈ ಬಗ್ಗೆ ಟ್ವೀಟ್ ಮಾಡಿದ್ದು, “ಉನ್ನತ ಮಟ್ಟದ ಎಸ್ಐಟಿ ತನಿಖೆಗೆ ಆದೇಶಿಸಲಾಗಿದೆ. ಓಟಿಂಗ್ನಲ್ಲಿ ನಾಗರಿಕರ ಹತ್ಯೆಗೆ ಕಾರಣವಾದ ದುರದೃಷ್ಟಕರ ಘಟನೆಯು ಅತ್ಯಂತ ಖಂಡನೀಯವಾಗಿದೆ. ದುಃಖಿತ ಕುಟುಂಬಗಳಿಗೆ ಸಂತಾಪ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಕಾನೂನಿನ ಪ್ರಕಾರ ಎಲ್ಲ ರೀತಿಯ ನ್ಯಾಯವನ್ನು ಒದಗಿಸಲಾಗುತ್ತದೆ” ಎಂದು ಭರವಸೆ ನೀಡಿದ್ದಾರೆ.
ಗೃಹಸಚಿವ ಅಮಿತ್ ಶಾ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ” ನಾಗಾಲ್ಯಾಂಡ್ನ ಓಟಿಂಗ್ನಲ್ಲಿ ನಡೆದ ಅಹಿತಕರ ಘಟನೆಯಿಂದ ಬೇಸರವಾಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪ. ರಾಜ್ಯ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಎಸ್ಐಟಿ ಈ ಘಟನೆಯನ್ನು ಕೂಲಂಕುಷವಾಗಿ ತನಿಖೆ ನಡೆಸಿ, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲಿದೆ” ಎಂದು ಹೇಳಿದ್ದಾರೆ.