ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಅಭೂತಪೂರ್ವ ಗೆಲುವು ದಾಖಲಿಸಿದ ಬೆನ್ನಲ್ಲೇ ಆಪ್ ನಾಯಕ ನಾಯಕ ರಾಘವ್ ಚಡ್ಡಾ ಪ್ರತಿಕ್ರಿಯೆ ನೀಡಿದ್ದು, ಮುಂದಿನ ದಿನಗಳಲ್ಲಿ ಆಪ್ ಪಕ್ಷವು ರಾಷ್ಟ್ರೀಯ ಶಕ್ತಿಯಾಗಿ ಹೊರಹೊಮ್ಮಲಿದ್ದು, ಕಾಂಗ್ರೆಸ್ ಗೆ ಪರ್ಯಾಯ ಶಕ್ತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಪ್ ಪಕ್ಷದ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಚಾಡ್ಡಾ, ಇದೀಗ ಇಡೀ ದೇಶವು ಅರವಿಂದ್ ಕೇಜ್ರಿವಾಲ್ ಮಾದರಿಯ ಆಡಳಿತವನ್ನು ಎದುರು ನೋಡುತ್ತಿದೆ. ಪಂಜಾಬ್ನ ಜನರು ‘ಪೊರಕೆ’ (ಎಎಪಿ ಚಿಹ್ನೆ) ಮೂಲಕ ರಾಜ್ಯವನ್ನು ಸ್ವಚ್ಛಗೊಳಿಸಿದ್ದಾರೆ ಎಂದು ಹೇಳಿದರು.
ಸಾಂಪ್ರದಾಯಿಕ ಪಕ್ಷಗಳಾದ ಶಿರೋಮಣಿ ಅಕಾಲಿದಳ ಮತ್ತು ಕಾಂಗ್ರೆಸ್ನ ಯುಗ ಪಂಜಾಬ್ನಲ್ಲಿ ಅಂತ್ಯಗೊಂಡಿದೆ. ಪಂಜಾಬಿಗರಿಗೆ ಎಎಪಿ ಪಕ್ಷವು ಸ್ವಚ್ಛ ಮತ್ತು ಪ್ರಾಮಾಣಿಕ ಆಡಳಿತವನ್ನು ನೀಡಲಿದೆ ಎಂದು ಎಎಪಿ ರಾಜ್ಯ ವ್ಯವಹಾರಗಳ ಸಹ-ಪ್ರಭಾರಿಯೂ ಆಗಿರುವ ಚಡ್ಡಾ ಹೇಳಿದ್ದಾರೆ.
ಎಎಪಿಯ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಕರೆಯುವ ಮೂಲಕ ಎಎಪಿ ವಿರುದ್ಧ ನಕಾರಾತ್ಮಕ ಪ್ರಚಾರ ನಡೆಸಿದ ವಿಪಕ್ಷಗಳ ವಿರುದ್ಧ ಅವರು ಇದೇವೇಳೆ ಕಿಡಿಕಾರಿದರು. ಕೇಜ್ರಿವಾಲ್ ಅವರು ಸಕಾರಾತ್ಮಕ ಕಾರ್ಯಸೂಚಿಯನ್ನು ಹೊಂದಿದ್ದಾರೆ. ಅವರ ಅಭಿವೃದ್ಧಿ ಕಾರ್ಯಕ್ರಮಗಳ ಫಲಶೃತಿ ಪಂಜಾಬ್ ಚೂನಾವಣೆ ಫಲಿತಾಂಶ ರೂಪದಲ್ಲಿ ಜನರ ಮುಂದಿದೆ ಎಂದು ಹೇಳಿದರು.
ಪಂಜಾಬ್ ನ 117 ವಿಧಾನಸಭಾ ಸ್ಥಾನಗಳ ಪೈಕಿ 91 ಕ್ಷೇಗಳಲ್ಲಿ ಮುನ್ನಡೆ ಸಾಧಿಸಿರುವ ಆಮ್ ಆದ್ಮಿ ಪಕ್ಷ ಪಂಜಾಬ್ ಚುನಾವಣೆಯಲ್ಲಿ ಹೊಸ ಭಾಷ್ಯ ಬರೆದಿದೆ.