ಉತ್ತರ ಪ್ರದೇಶ : ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ(ಎಸ್ಬಿಎಸ್ಪಿ) ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡ ಬೆನ್ನಿಗೇ ಉತ್ತರಪ್ರದೇಶದ ಏಳು ವಿವಿಧ ಪಕ್ಷಗಳು ಬಿಜೆಪಿಗೆ ಬೆಂಬಲ ಘೋಷಿಸಿವೆ.
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿರುವ ಈ ಪಕ್ಷಗಳೆಲ್ಲ ತೀರಾ ಹಿಂದುಳಿದ, ಬುಡಗಟ್ಟು ಮತ್ತು ವನವಾಸಿ ಸಮುದಾಯಗಳಿಗೆ ಸೇರಿದ ಪಕ್ಷಗಳೆಂಬುದು ಗಮನಾರ್ಹ ಅಂಶವಾಗಿದೆ.
ಬುಧವಾರ ಎಸ್ಪಿ ಮತ್ತು ಎಸ್ಬಿಎಸ್ಪಿ ನಾಯಕರು ವೇದಿಕೆಯೊಂದನ್ನು ಹಂಚಿಕೊಂಡು , 2022ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದವು.
ಇತ್ತ ಏಳು ಸಣ್ಣ ಪಕ್ಷಗಳನ್ನು ಒಳಗೊಂಡ ‘ಹಿಸ್ಸೆದಾರಿ ಮೋರ್ಚಾ’ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಬುಧವಾರ ಘೋಷಿಸಿದ್ದು, ಈ ಪಕ್ಷಗಳ ನಾಯಕರು ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರಿಗೆ ಬೆಂಬಲ ಪತ್ರವನ್ನು ನೀಡಿದ್ದಾರೆ.
ಇವರಲ್ಲಿ, ಭಾರತೀಯ ಮಾನವ ಸಮಾಜ ಪಕ್ಷದ ಕೇವತ್ ರಾಮಧಾನಿ ಬಿಂದ್, ಮುಸಾಹರ್ ಆಂದೋಲನ ಮಂಚ್ನ ಚಂದ್ರ ವನವಾಸಿ ಮತ್ತು ಶೋಷಿತ್ ಸಮಾಜ ಪಕ್ಷದ ಬಾಬುಲಾಲ್ ರಾಜ್ಭರ್ ,ಮಾನವ್ ಹಿಟ್ ಪಾರ್ಟಿಯ ಕೃಷ್ಣ ಗೋಪಾಲ್ ಸಿಂಗ್ ಕಶ್ಯಪ್, ಭಾರತೀಯ ಸುಹೇಲ್ದೇವ್ ಜನತಾ ಪಕ್ಷದ ಭೀಮ್ ರಾಜ್ಭರ್, ಪೃಥ್ವಿರಾಜ್ ಜನಶಕ್ತಿ ಪಕ್ಷದ ಚಂದನ್ ಸಿಂಗ್ ಚೌಹಾಣ್ ಮತ್ತು ಭಾರತೀಯ ಸಮತಾ ಸಮಾಜ ಪಕ್ಷದ ಮಹೇಂದ್ರ ಪ್ರಜಾಪತಿ ಸೇರಿದ್ದಾರೆ.