ಲಕ್ನೋ(ಮಾ.04) : ಮಗನನ್ನು ಹೆದರಿಸುವ ಸಲಲುವಾಗಿ ಮಗನನ್ನು ಸೇತುವೆಗೆ ನೇತಾಡಿಸಿದ ತಂದೆ ಈಗ ಶಾಶ್ವತವಾಗಿ ಆತನನ್ನು ಕಳೆದುಕೊಂಡಿದ್ದಾರೆ. ಹೌದು ಬಾಗನ್ ನದಿಯ ಸೇತುವೆಗೆ ಮಗನನ್ನು ನೇತಾಡಿಸಿದ್ದಾರೆ, ದುರಾದೃಷ್ಟವಶಾತ್ ಕೈ ತಪ್ಪಿ ಮಗ ನದಿಗೆ ಬಿದ್ದು, ಮುಳುಗಿ ಸಾವನ್ನಪ್ಪಿದ್ದಾನೆ.
ಇಷ್ಟಾದರೂ ತಂದೆ ಮೃತದೇಹವನ್ನು ಮನೆಗೆ ಕೊಂಡೊಯ್ದು ಪೊಲೀಸರಿಗೆ ತಿಳಿಸದೆ ಗ್ರಾಮದಲ್ಲಿ ಹೂತು ಹಾಕಿದ್ದಾರೆ. ಗುರುವಾರ ಈ ಮಾಹಿತಿ ವೈರಲ್ ಆದ ನಂತರ ಪೊಲೀಸರು ವಿಷಯ ತಿಳಿದು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಮಹಾಶಿವರಾತ್ರಿಯ ದಿನದಂದು, ಮಧ್ಯಪ್ರದೇಶದ ಪನ್ನಾದ ಧರಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಗರದಲ್ಲಿ ವಾಸಿಸುವ ವ್ಯಕ್ತಿಯ 12 ವರ್ಷದ ಮಗ, ಮನೆ ಮಂದಿಗೆ ತಿಳಿಸದೆ ನೀಲಕಂಠ ದೇವರ ದರ್ಶನ ಪಡೆಯಲು ಹಾಗೂ ಕಲಿಂಜರ್ನಲ್ಲಿನ ಜಾತ್ರೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಬಾಲಕನ ತಂದೆ ಬುಧವಾರ ಆತನನ್ನು ಹುಡುಕಲು ಅಲ್ಲಿಗೆ ಬಂದಿದ್ದಾರೆ.
ಜಾತ್ರೆಯಲ್ಲಿ ತಿರುಗುತ್ತಿದ್ದ ಮಗನನ್ನು ಹಿಡಿದು ತಂದೆ ಥಳಿಸಿದ್ದಾರೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಆತನನ್ನು ತನ್ನೊಂದಿಗೆ ಸೈಕಲ್ನಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಯುಪಿ-ಎಂಪಿ ಗಡಿಯಲ್ಲಿ ಹಾದು ಹೋಗುತ್ತಿದ್ದಾಗ ಬಾಗೇನ್ ನದಿ ಸೇತುವೆಯ ಮೇಲೆ ಸೈಕಲ್ ನಿಲ್ಲಿಸಿ ಮಗನನ್ನು ಹೆದರಿಸಲು ಕೈ ಹಿಡಿದು ನದಿ ಸೇತುವೆಯಿಂದ ಎಸೆಯುವುದಾಗಿ ಬೆದರಿಸಿ ನೇತಾಡಿಸಿದ್ದಾರೆ. ಈ ಭರಾಟೆಯಲ್ಲಿ ಮಗ ಕೈತಪ್ಪಿ ನದಿಗೆ ಬಿದ್ದಿದ್ದಾನೆ.
ಇನ್ನು ಇಲ್ಲಿನ ಸದ್ದುಗದ್ದಲಕ್ಕೆ ದಾರಿಹೋಕರು ಹಾಗೂ ಸುತ್ತಮುತ್ತಲಿನ ಜನ ಜಮಾಯಿಸಿದ್ದಾರೆ. ಕೂಡಲೇ ನದಿಗಿಳಿದು ಬಾಲಕನನ್ನು ಮೇಲೆ ತರಲಾಗಿದೆ, ಆದರೆ ಅಷ್ಟರಲ್ಲಾಗಲೇ ಆತ ಮುಳುಗಿ ಸಾವನ್ನಪ್ಪಿದ್ದ. ತಂದೆ ಮಗನ ಶವದೊಂದಿಗೆ ಊರಿಗೆ ಬಂದು ಊರ ಹೊರಗೆ ಗುಮಡಿ ತೋಡಿ ತಾನೇ ಸಮಾಧಿ ಮಾಡಿದ್ದಾರೆ. ಗುರುವಾರದಂದು ಗ್ರಾಮಸ್ಥರಿಗೆ ಸಂಪೂರ್ಣ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಂದೆ ಮನೆಯಿಂದ ತಲೆಮರೆಸಿಕೊಂಡಿದ್ದಾರೆ.
ಕಳಿಂಜರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್ಪಿ ಪಟೇಲ್ ಪ್ರಕಾರ, ಬಾಗೇನ್ ನದಿಯಲ್ಲಿ ಮುಳುಗಿ ಹದಿಹರೆಯದವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿದೆ. ಈ ಸಂಬಂಧ ಇದುವರೆಗೆ ಯಾವುದೇ ದೂರು ಬಂದಿಲ್ಲ. ತನಿಖೆ ನಡೆಸಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಘಟನೆಯ ಮಾಹಿತಿಯ ಮೇರೆಗೆ ಪನ್ನಾದ ಧರಂಪುರ ಪೊಲೀಸ್ ಠಾಣೆ ಮತ್ತು ಬಂಡಾದ ಕಲಿಂಜರ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಎರಡೂ ಪೊಲೀಸ್ ಠಾಣೆಗಳಲ್ಲಿ ಜಾಗಕ್ಕೆ ಸಂಬಂಧಿಸಿದಂತೆ ಬಹಳ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.