ಲಕ್ನೋ: ಉತ್ತರ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಮಂಗಳವಾರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಯುಪಿ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, “ದಿ ಕೇರಳ ಸ್ಟೋರಿ’ ಅನ್ನು ತೆರಿಗೆ ಮುಕ್ತಗೊಳಿಸುವುದು ಉತ್ತಮ ನಿರ್ಧಾರವಾಗಿದೆ. ಉತ್ತರ ಪ್ರದೇಶದ ಜನರು ಈ ಚಿತ್ರವನ್ನು ನೋಡಬೇಕು ಮತ್ತು ನಮ್ಮ ಸಹೋದರಿಯರು ಹೇಗೆ ತೊಂದರೆ ಅನುಭವಿಸಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಾವು ಕೂಡ ಹೋಗಿ ಚಿತ್ರ ನೋಡುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ಪಶ್ಚಿಮ ಬಂಗಾಳದ ಜನರು ಚಿತ್ರ ಮೇಲಿನ ನಿಷೇಧವನ್ನು ಒಪ್ಪಿಕೊಳ್ಳಲಾರರು ಎಂದು ಹೇಳಿದ್ದಾರೆ.
ಸುದೀಪ್ತೋ ಸೇನ್ ಅವರ ನಿರ್ದೇಶನದ ‘ದಿ ಕೇರಳ ಸ್ಟೋರಿ’, ಇಸ್ಲಾಂಗೆ ಮತಾಂತರಗೊಂಡು ಭಯೋತ್ಪಾದಕ ಸಂಘಟನೆಗೆ ಸೇರಿ ಅನುಭವಿಸುವ ತೊಂದರೆಯ ಕುರಿತು ಚಿತ್ರ ಕಥಾಹಂದರ ಹೊಂದಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು “ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಬೆದರಿಕೆ” ಯನ್ನು ಉಲ್ಲೇಖಿಸಿ ಚಲನಚಿತ್ರವನ್ನು ನಿಷೇಧಿಸಲು ನಿರ್ಧರಿಸಿದ್ದಾರೆ. ಮಧ್ಯಪ್ರದೇಶದ ಈಗಾಗಲೇ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದೆ.