ಮನುಷ್ಯನ ಅಂಗಗಳಲ್ಲಿ ಕಣ್ಣು ಬಹುಮುಖ್ಯವಾಗಿದೆ. ಅಷ್ಟೇ ಅಲ್ಲ ಅದು ಆಕರ್ಷಣೆಯೂ ಹೌದು, ಅಂದದ ಯುವತಿಯರ ಸೆಳೆತವೇ ಕಣ್ಣು ಎಂದರೆ ತಪ್ಪಾಗಲಾರದು ‘ಚೆಲುವೆಯ ಅಂದದ ಮೊಗಕ್ಕೆ ಕಣ್ಣೇ ಭೂಷಣ’ ಎಂಬಂತೆ ನೋಡಿದಾಕ್ಷಣ ಮೊದಲು ಸೆಳೆಯುವುದು ಕಣ್ಣು. ಸೂಕ್ಷ್ಮ ಅಂಗವಾಗಿರುವ ಕಣ್ಣನ್ನು ರಕ್ಷಿಸಿಕೊಳ್ಳುವುದು ಸಹ ನಮ್ಮ ಮೊದಲ ಕರ್ತವ್ಯವಾಗಿದೆ. ದಿನ ನಿತ್ಯದ ಬದುಕಿನಲ್ಲಿ ಒಂದಷ್ಟು ಜಾಗ್ರತೆ ಹಾಗೂ ಮತ್ತೊಂದಷ್ಟು ಕ್ರಮಗಳನ್ನು ಅನುಸರಿಸಿದರೆ ಕಣ್ಣನ್ನು ನಾವೇ ರಕ್ಷಿಸಿಕೊಳ್ಳಬಹುದಲ್ಲದೆ, ಕಣ್ಣನ್ನು ಬಾಧಿಸುವ ಕೆಲವು ತೊಂದರೆಗಳಿಂದ ಮುಕ್ತರಾಗಬಹುದು.
ಸಾಮಾನ್ಯವಾಗಿ ಕಣ್ಣಿನ ಸುತ್ತಲಿನ ಪ್ರದೇಶ ಸ್ವಲ್ಪ ಲಿಂಫಾಟಿಕ್ ದ್ರವದಿಂದ ಉಬ್ಬುತ್ತದೆ. ಇದಕ್ಕೆ ತಲೆಯ ಕೆಳಗೆ ಸರಿಯಾಗಿ ದಿಂಬುಗಳನ್ನಿಟ್ಟುಕೊಂಡು ಮಲಗುವುದು ಒಳ್ಳೆಯದು. ವಯಸ್ಸಾದಂತೆ ಕಣ್ಣಿನ ಕೆಳಗೆ ಮೂಡುವ ಕೊಬ್ಬಿನಿಂದಾಗಿ ಈ ಚೀಲಗಳು ಬೆಳೆಯುತ್ತವೆ. ಇದನ್ನು ಮೇಕಪ್ ನಿಂದ ಕನ್ಸೀಲರ್ ಬಳಸಿ ಮುಚ್ಚಿ ಹಾಕಬಹುದಾಗಿದೆ.
ಬಹಳಷ್ಟು ಮಂದಿಗೆ ಪಿಗ್ಮೆಂಟ್ಸ್ ನಿಂದಾಗಿ ಸಹ ಕಣ್ಣಿನ ಕೆಳಗೆ ವಲಯಗಳೇರ್ಪಡುತ್ತವೆ. ಮೆಲಾನಿನ್ ಪಿಗ್ಮೆಂಟ್ಸ್ ಈ ಪ್ರದೇಶದಲ್ಲಿ ಸೇರಿಕೊಳ್ಳುವುದರಿಂದಲೇ ಹೀಗಾಗುತ್ತದೆ. ಕಣ್ಣಿನ ಕೆಳಗೆ ಸೌತೆಕಾಯಿ ಬಳಸುವುದರಿಂದಲೂ ಒಳ್ಳೆಯದಾಗುತ್ತದೆ. ಹೆಚ್ಚು ನಿದ್ದೆಗೆಡುವುದು, ಒತ್ತಡ ಹೇರುವುದು ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹೆಚ್ಚು ನಿದ್ದೆ ಮಾಡಿ ಕಣ್ಣಿಗೆ ರಿಲ್ಯಾಕ್ಸ್ ನೀಡುವುದು ಒಳ್ಳೆಯದು.
ಕೆಲವರ ಕಣ್ಣುಗಳಲ್ಲಿ ಕೆಂಪು ಗೆರೆಗಳು ಇರುತ್ತವೆ. ಇದಕ್ಕೂ ಸಹ ಸೌತೆಕಾಯಿಯೇ ದಿವ್ಯ ಔಷಧಿ. ಸೌತೆಕಾಯಿ ರಕ್ತನಾಳಗಳನ್ನು ತಂಪಾಗಿಡುತ್ತದೆ. ಹೆಚ್ಚು ಉಪ್ಪು ಇರುವ ಆಹಾರ ಸೇವಿಸಬೇಕು. ಆಲ್ಕೋ ಹಾಲ್ ಸೇವನೆ ಕಡಿಮೆ ಮಾಡಬೇಕು. ಇದರಿಂದ ಕಣ್ಣಿನ ಕೆಳಗೆ ದ್ರವಗಳು ಸಂಗ್ರಹವಾಗುವುದಿಲ್ಲ. ರಾತ್ರಿ ವೇಳೆ ಚೆನ್ನಾಗಿ ನಿದ್ದೆ ಮಾಡುವುದರಿಂದ ಕಣ್ಣಿನ ಕೆಳಗೆ ಚರ್ಮದಲ್ಲಿನ ಕಣಗಳು ಶಕ್ತಿಯನ್ನು ಪಡೆದುಕೊಳ್ಳುತ್ತವೆ.
ಕಣ್ಣಿನ ರಕ್ಷಣೆಗೆ ಕೆಲವು ಜಾಗ್ರತೆಗಳನ್ನು ನಾವು ವಹಿಸಿಕೊಳ್ಳವುದು ಒಳ್ಳೆಯದು. ಓದುವಾಗ ಅಗತ್ಯ ಬೆಳಕಿರುವಂತೆ ನೋಡಿಕೊಳ್ಳಬೇಕು. ಮಂದ ಬೆಳಕಿನಲ್ಲಿ ಓದುವ ಸಾಹಸ ಮಾಡಬಾರದು. ಅಗತ್ಯ ಬಿದ್ದಾಗಲೆಲ್ಲಾ ಕನ್ನಡಕ ಬಳಸುವುದು ಒಳ್ಳೆಯದು. ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕುಳಿತುಕೊಳ್ಳುವದರಿಂದ ಕಣ್ಣಿಗೆ ಹಾನಿಯಾಗುವುದಿಲ್ಲ. ಆದರೆ ಹೆಚ್ಚು ಹೊತ್ತು ಬೆಳಕು ಬೀರುವ ಸ್ಕ್ರೀನ್ ಕಡೆ ನೋಡುವುದರಿಂದ ಕಣ್ಣುಗಳು ಬೇಗ ಆಯಾಸಗೊಳ್ಳುತ್ತವೆ. ಹೆಚ್ಚು ಸಮಯ ಸ್ಕ್ರೀನ್ ಮುಂದೆ ಕೆಲಸಮಾಡುವಾಗ ಮಧ್ಯೆ ಮಧ್ಯೆ ಕಣ್ಣಿಗೆ ವಿಶ್ರಾಂತಿ ನೀಡುವುದು, ಆಗಾಗ ಅತ್ತ ಇತ್ತ ನೋಡುವುದು ಒಳ್ಳೆಯದು.
ಕ್ಯಾರೆಟ್ ತಿನ್ನುವದರಿಂದ ಸಹ ಕಣ್ಣಿನ ನೋಟ ಚುರುಕುಗೊಳ್ಳುತ್ತದೆ. ಕ್ಯಾರೆಟ್ ನಲ್ಲಿ ಕಣ್ಣಿಗೆ ಅಗತ್ಯವಾದ ವಿಟಮಿನ್ ‘ಎ’ ಇರುತ್ತದೆ. ವಿಟಮಿನ್ ‘ಬಿ’ ಇರುವ್ವ ಸೊಪ್ಪು ತರಕಾರಿಗಳು, ಮಾವಿನಕಾಯಿ, ಕೋಳಿಮೊಟ್ಟೆ ಸಹ ಒಳ್ಳೆಯದು. ಕಣ್ಣಿನ ಸುತ್ತ ಇರುವ ಅತಿ ಸೂಕ್ಷ್ಮವಾದ ಚರ್ಮ ಒತ್ತಡಕ್ಕೆ ವಾತಾವರಣದಲ್ಲಿನ ಮಾಲಿನ್ಯದ ಪ್ರಭಾವ ಕಣ್ಣಿನ ಮೇಲುಂಟಾಗಿ ತೊಂದರೆಗಳಾಗುತ್ತವೆ ಯಾದರೂ ವ್ಯಾಯಾಮ, ಒಳ್ಳೆಯ ಆಹಾರ, ಕಣ್ತುಂಬ ನಿದ್ದೆ ಕಣ್ಣನ್ನು ರಕ್ಷಿಸುತ್ತವೆ. ಕಣ್ಣಿನ ಸಮಸ್ಯೆ ಉಂಟಾದಾಗ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.