ಮೈಸೂರು ಜೂನ್ 20 ಮೈಸೂರು ಅಂದ ಕೂಡಲೇ ನಮ್ಮ ಕಣ್ಣ ಮುಂದೆ ತೇಲಿ ಬರುವುದು ಭವ್ಯ ಅರಮನೆ, ಮೃಗಾಲಯ, ಕೆ ಆರ್ ಎಸ್ ಮತ್ತು ಚಾಮುಂಡಿ ಬೆಟ್ಟ. ಆದರೆ ಸಾಂಸ್ಖೃತಿಕ ನಗರಿಯು ಯೋಗದ ತವರೂರು ಕೂಡ ಆಗಿರುವುದುಬಹುತೇಕರಿಗೆ ತಿಳಿದಿಲ್ಲ. 2014 ರಲ್ಲಿಯೇ ಕೇಂದ್ರದ ಎನ್ಡಿಏ ಸರ್ಕಾರದ ಪ್ರಯತ್ನದ ಕಾರಣದಿಂದ ಸನಾತನ ಪರಂಪರೆಯ ದೈಹಿಕ ಅಭ್ಯಾಸ ಕಲೆ ಯೋಗವನ್ನು ವಿಶ್ವ ಸಂಸ್ಥೆಯು ಗುರುತಿಸಿ ಜೂನ್ 21 ರಂದು ಅಂತರ್ರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತು. ನಂತರ ವಿಶ್ವಾದ್ಯಂತ ಜನಪ್ರಿಯವಾಗಿರುವ ಯೋಗವು ಇಂದು 180 ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲ್ಪಡುತ್ತಿದೆ.
ನೂರಾರು ವರ್ಷಗಳ ಇತಿಹಾಸ ಇರುವ ಯೋಗ ವನ್ನು ಪ್ರೋತ್ಸಾಹಿಸಿ ಬೆಳೆಸಿದವರು ಮೈಸೂರಿನ ಯದುವಂಶದ ಅರಸರು. ಮೊಟ್ಟ ಮೊದಲ ಯೋಗ ಶಾಲೆಯು ಆರಂಬಗೊಂಡಿದ್ದು ಮೈಸೂರಿನಲ್ಲಿಯೇ. ರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ರಚಿತ ವಿದ್ವತ್ಪೂರ್ಣ ಪುಸ್ತಕ ಶ್ರೀತತ್ತ್ವನಿಧಿಯಲ್ಲಿ ಯೋಗಾಸನದ 122 ಆಸನಗಳ ವಿವರಣೆಯನ್ನು ದಾಖಲಿಸಲಾಗಿದೆ. ಈ ಪುಸ್ತದ ಪ್ರಕಾರ ಮೈಸೂರು ಸಾಮ್ರಾಜ್ಯದಲ್ಲಿ ಯೋಗಕ್ಕೆ 225 ವರ್ಷಗಳಷ್ಟು ಹಿಂದಿನ ಪ್ರಾಚೀನ ಇತಿಹಾಸವಿರುವುದು ಸ್ಪಷ್ಟವಾಗುತ್ತದೆ.
ಮೈಸೂರು ಅರಮನೆಯಲ್ಲಿ 1930 ರಲ್ಲಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ರಾಜಮನೆತನದ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಯೋಗವನ್ನು ಕಲಿಸಬೇಕು ಎಂಬ ಮಹತ್ವದ
ನಿರ್ಧಾರವನ್ನು ಕೈಗೊಂಡು ಯೋಗಶಾಲೆಯನ್ನು ಪ್ರಾರಂಭಿಸಿದರು. ಈ ಮೂಲಕ, ಯೋಗ ಶಿಕ್ಷಣ ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದರು. ಮೈಸೂರು ಅರಮನೆಯಲ್ಲಿ ಯೋಗಶಾಲೆಯನ್ನು ಪ್ರಾರಂಭಿಸಿ ಯೋಗಾಭ್ಯಾಸವನ್ನು ಕಲಿಸುವ ಜವಾಬ್ದಾರಿಯನ್ನು ತಿರುಮಲೈ ಕೃಷ್ಣಮಾಚಾರ್ಯ ಅವರಿಗೆ ಅವರಿಗೆ ನೀಡಲಾಯಿತು. ಇವರನ್ನು ಆಧುನಿಕ ಯೋಗದ ಪಿತಾಮಹ ಎಂದು ಪರಿಗಣಿಸಲಾಗಿದೆ. ಇವರ ಪ್ರತಿಭೆ , ಜ್ಞಾನವನ್ನು ಗುರುತಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷ್ಣಮಾಚಾರ್ಯ ಅವರನ್ನು ಯೋಗದ ರಾಯಭಾರಿಯಾಗಿ ದೇಶದ ವಿವಿಧ ಭಾಗಗಳಿಗೆ ಕಳುಹಿಸಿದರು.
ಕೃಷ್ಣಮಾಚಾರ್ಯರು ಹಠ ಯೋಗವನ್ನು ಅಭಿವೃದ್ಧಿಪಡಿಸಿ ಮೊತ್ತ ಮೊದಲ ಹಠ ಯೋಗ ಶಾಲೆಯನ್ನು ಪ್ರಾರಂಭಿಸಿದರು. ಅವರ ಯೋಗ ಶಾಲೆಯ ಶಿಷ್ಯರಾಗಿದ್ದ ಅವರ ಮಗ ದೇಶಿಕಾಚಾರ್ ಅವರು ಯೋಗದಲ್ಲಿ ವಿನಿಯೋಗ ವಿಧಾನವನ್ನು ಅಭಿವೃದ್ಧಿಪಡಿಸಿದರು. ಬಿಕೆಎಸ್ ಅಯ್ಯಂಗಾರ್ ಎಂದೇ ಖ್ಯಾತಿ ಪಡೆದಿದ್ದ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಸಹಾ ಟಿ ಕೃಷ್ಣಮಾಚಾರ್ಯರ ಬಳಿಯೇ ಯೋಗವನ್ನು ಕಲಿತಿದ್ದು. ನಂತರ ಬಿಕೆಎಸ್ ಅಯ್ಯಂಗಾರ್ ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಅಯ್ಯಂಗಾರ್ ಯೋಗವನ್ನು ಅಭಿವೃದ್ಧಿ ಪಡಿಸಿ ಪರಿಚಯಿಸಿದರು. ಮೈಸೂರಿನ ಇನ್ನೊಬ್ಬ ಯೋಗ ಗುರು ಅಂದರೆ ಅದು ಅಷ್ಟಾಂಗ ಯೋಗವನ್ನು ಅಭಿವೃದ್ಧಿಪಡಿಸಿದ ಯೋಗ ಗುರು ಕೆ ಪಟ್ಟಾಭಿ ಜೋಯಿಸ್ ಅವರ ಯೋಗವು ಇಂದು ಯೋಗ ಕಲಿಯುವ ಉತ್ಸಾಹಿಗಳಲ್ಲಿ ಜನಪ್ರಿಯವಾಗಿದೆ.
ಯೋಗವು ಕೆಲ ಖಾಯಿಲೆಗಳಿಗೆ ರಾಮಬಾಣ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಎಷ್ಟೋ ವಾಸಿಯಾಗದ ಆರೋಗ್ಯ ಸಮಸ್ಯೆಗಳನ್ನು ಯೋಗದ ಮೂಲಕ ವಾಸಿ ಮಾಡಿಕೊಂಡ ಉದಾಹರಣೆ ಹೆಚ್ಚಾಗಿವೆ. ಇದೇ ಕಾರಣಕ್ಕೆ ಇಂದು ಯೋಗಕ್ಕೆ ಬೇಡಿಕೆ ಹೆಚ್ಚಾಗಿದೆ. ಇದೆ.ಕಾರಣಕ್ಕೆ ವಿದೇಶಿಗರು ಸೇರಿದಂತೆ ಹಲವರು ಮೈಸೂರಿನತ್ತ ಮುಖ ಮಾಡಿದ್ದಾರೆ. ಅಷ್ಟಾಂಗ ಯೋಗ, ಹಠಯೋಗ ಜೊತೆಗೆ, ಹತ್ತಾರು ಆಧುನಿಕ ಯೋಗ ತರಬೇತಿ ಸಂಸ್ಥೆಗಳು ಇಂದು ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಈ ಯೋಗ ಕೇಂದ್ರಗಳು ಪಾರಂಪರಿಕ ಶೈಲಿಯ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತಿದ್ದು ಇವು ಸಹಜವಾಗಿ ವಿದೇಶಿಯರನ್ನು ಆಕರ್ಷಿಸುತ್ತಿದೆ. ಈ ಕಟ್ಟಡಗಳ ವಾಸ್ತು ಶಿಲ್ಪಗಳು ಮೈಸೂರು ಸಾಮ್ರಾಜ್ಯದ ಗತ ವೈಭವನ್ನು ಸಾರುತ್ತಾ ಯೋಗಾಸಕ್ತರನ್ನು ತನ್ನೆಡೆಗೆ ಸೆಳೆಯುತ್ತಿವೆ. ಬೇರೆ ನಗರಗಳಿಗೆ ಹೋಲಿಸಿದರೆ ಜೀವನ ನಡೆಸಲು ಬೇಕಾಗುವ ಖರ್ಚಿನ ವೆಚ್ಚ ಮೈಸೂರು ನಗರದಲ್ಲಿ ಕಡಿಮೆ ಇರುವ ಕಾರಣಕ್ಕೆ ವಿದೇಶಿಯರು ಹಾಗೂ ಇತರ ಯೋಗಾಸಕ್ತರು ಮೈಸೂರಿಗೆ ಶಿಕ್ಷಣ ಕಲಿಯಲು ಆಗಮಿಸುತ್ತಾರೆ. ಹೆಚ್ಚು ಹಣವನ್ನು ವ್ಯಯಿಸದೆ ಯೋಗವನ್ನು ಇಲ್ಲಿ ಸುಲಭವಾಗಿ ಕೈಗೆಟಕುವ ದರದಲ್ಲಿ ಕಲಿಯಬಹುದು. ಟ್ರಾಫಿಕ್ ಕಿರಿಕಿರಿ ಜಾಮ್ ಗಳಿಂದ ಮುಕ್ತವಾಗಿರುವ ನಗರದ ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸುವುದೂ ಸುಲಭವಾಗಿದ್ದು ಗುಣಮಟ್ಟದ ಆಹಾರವೂ ದೊರೆಯುತ್ತಿದೆ.
ಮೈಸೂರಿನಲ್ಲಿ ಬೆಳಿಗ್ಗೆ 4 ಘಂಟೆಗೆ ಆರಂಬಗೊಳ್ಳುವ ಯೋಗ ಶಾಲೆಗಳಲ್ಲಿ ರಾತ್ರಿ 9 ಘಂಟೆಯವರೆಗೂ ತರಗತಿಗಳು ನಡೆಯುತ್ತಿವೆ. ಯೋಗ ಗುರು ಭರತ್ ಶೆಟ್ಟಿ ಹಾಗೂ ಶರತ್
ಜೋಯಿಸ್ ಅವರು ನಡೆಸುತ್ತಿರುವ ಯೋಗ ಕೇಂದ್ರದಲ್ಲಿ 50 ಕ್ಕೂ ಹೆಚ್ಚು ದೇಶದ ಪ್ರಜೆಗಳು ಯೋಗಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಯೋಗ ಕಲಿತ ವಿದೇಶೀಯರು ತಮ್ಮ ದೇಶಕ್ಕೆ
ತೆರಳಿ ಯೋಗ ಶಾಲೆಗಳನ್ನು ಆರಂಬಿಸುತಿದ್ದಾರೆ. ಇದರಿಂದಾಗಿ ಯೋಗ ದಿನೇ ದಿನೇ ಜನಪ್ರಿಯಗೊಳ್ಳುತ್ತ ಸಾಗಿದೆ.
ಈ ವರ್ಷ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮೈಸೂರಿನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಯೋಗ ದಿನದ ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಇದು ಇಡೀ ವಿಶ್ವವೇ ಮೈಸೂರಿನತ್ತ ತಿರುಗಿ ನೋಡುವಂತೆ ಮಾಡಿದೆ. ಪ್ರಧಾನ ಮಂತ್ರಿಗಳು ಮೈಸೂರಿನಲ್ಲಿ ಉಳಿಯುತ್ತಿರುವುದು ಕಳೆದ 8 ವರ್ಷಗಳಲ್ಲಿ ಇದು ಮೂರನೇ ಬಾರಿ ಆಗಿದೆ. ಮೋದಿ ಅವರಿಗೆ ಕಾಣಿಕೆಯಾಗಿ ಮೋದಿ ಅವರದೇ ಯೋಗಾಸನದ ಚಿತ್ರ ಇರುವ ಮೆಮೆಂಟೋ ಮತ್ತು ವಿಶೇಷವಾಗಿ ರೇಷ್ಮೆ ನೂಲು ಮತ್ತು ಮುತ್ತಿನಿಂದ ಥೈಲ್ಯಾಂಡಿನಲ್ಲಿ ತಯಾರಿಸಿದ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಗುತ್ತಿದೆ.
ಜಗತ್ತಿನ ಯೋಗ ರಾಜಧಾನಿ ಆಗಿರುವ ಮೈಸೂರಿನಲ್ಲಿ ಸರ್ಕಾರ ಯೋಗ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ನಗರದ ಹೊರವಲಯದ ಗ್ರಾಮೀಣ ಪ್ರದೇಶದಲ್ಲಿ ಯೋಗ ಗ್ರಾಮವನ್ನು ನಿರ್ಮಿಸಿದರೆ ಎಲ್ಲಾ ಪ್ರಾಕಾರದ ಯೋಗ ವನ್ನು ಕಲಿಸುವ ಶಾಲೆಗಳು ಒಂದೇ ಕಡೆ ಕಾರ್ಯನಿರ್ವಹಿಸಬಹುದು
ಜತೆಗೇ ಯೋಗ ವಿದ್ಯಾರ್ಥಿಗಳ ಹಾಸ್ಟೆಲ್ ವ್ಯವಸ್ಥೆಗೂ ಅನುಕೂಲ ಆಗಲಿದ್ದು ಮೈಸೂರು ಯೋಗ ದ ಹಬ್ ಆಗಲಿದೆ ಎಂಬುದು ಯೋಗಾಸಕ್ತರ ಒತ್ತಾಯವಾಗಿದೆ.