ಮೈಸೂರು: ತಂಬಾಕು ಬೆಳೆಬೆಳೆದು ಕೈಸುಟ್ಟುಗೊಂಡು ಸಾಲಗಾರನಾಗಿದ್ದ ಬೆಳೆಗಾರರೊಬ್ಬರು ಸಾಲಗಾರರ ಕಾಟ ತಾಳಲಾರದೆ ಮೆಣಸಿನ ಗಿಡಕ್ಕೆ ಸಿಂಪಡಿಸುವ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕು ಹರವೆ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹರವೆ ಕಲ್ಲಹಳ್ಳಿ ಗ್ರಾಮದ ನಿವಾಸಿ ರಾಮಸ್ವಾಮಿ (55) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಮೊದಲಿನಿಂದಲೂ ತಂಬಾಕು ಕೃಷಿ ಮಾಡಿಕೊಂಡು ಬಂದಿದ್ದರು. ತಮಗಿದ್ದ ಮೂರು ಎಕರೆ ಜಮೀನಿನಲ್ಲಿ ತಂಬಾಕು ಬೆಳೆಯುತ್ತಿದ್ದ ಅವರು ಅದರಿಂದ ಯಾವುದೇ ಲಾಭವನ್ನು ಪಡೆಯದೆ ನಷ್ಟಕ್ಕೊಳಗಾಗಿದ್ದರು.
ಇದರ ನಡುವೆ ತಮ್ಮ ಜಮೀನಿನಲ್ಲಿ 13ಥ13 ಅಳತೆಯ ಬ್ಯಾರನ್ ಗೆ ಲೈಸನ್ಸ್ ಹೊಂದಿದ್ದರು. ಇದಕ್ಕಾಗಿ ಹಾಗೂ ತಂಬಾಕು ಬೆಳೆಯಲು ಮಾಕೋಡು ಗ್ರಾಮದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ನಿಂದ ಸುಮಾರು 4 ಲಕ್ಷ ರೂ ಅಲ್ಲದೆ, ಕೈ ಸಾಲ ಸೇರಿದಂತೆ 5 ಲಕ್ಷರೂ ಸಾಲ ಮಾಡಿದ್ದರು ಎನ್ನಲಾಗಿದೆ. ಆದರೆ ಅವರ ನಿರೀಕ್ಷೆಯಂತೆ ಫಸಲು ಬಾರದೆ, ಇಳುವರಿಯೂ ಸಿಗದೆ ಸಂಪೂರ್ಣ ನಷ್ಟವಾಗಿತ್ತು. ಇದರಿಂದ ಸಾಲ ಹೆಚ್ಚಾಗಿತ್ತಲ್ಲದೆ, ದಿನದಿಂದ ದಿನಕ್ಕೆ ಸಾಲಗಾರರ ಕಾಟವೂ ಜಾಸ್ತಿಯಾಗಿತ್ತು.
ಇದರಿಂದ ಬೇಸತ್ತಿದ್ದ ರಾಮಸ್ವಾಮಿ ಅವರು ಆತ್ಮಹತ್ಯೆ ಆಲೋಚನೆ ಮಾಡಿದ್ದಾರೆ. ಅದರಂತೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಮನೆಯ ಹಿತ್ತಲಲ್ಲಿ ತಾವು ಸುಮಾರು ಒಂದು ಎಕರೆಯಲ್ಲಿ ಬೆಳೆದಿದ್ದ ಮೆಣಸಿನ ಗಿಡಕ್ಕೆ ಸಿಂಪಡಿಸಲೆಂದು ತಂದಿದ್ದ ರೋಗರ್ ಎಂಬ ಔಷಧಿಯನ್ನು ಶನಿವಾರ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಸೇವಿಸಿದ್ದಾರೆ.
ಔಷಧಿ ಸೇವಿಸಿ ಅಸ್ವಸ್ತಗೊಂಡ ರಾಮಸ್ವಾಮಿಯನ್ನು ಕಂಡ ಪಕ್ಕದ ಮನೆ ನಿವಾಸಿಗಳು ಹುಣಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಹುಣಸೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.