ಮಡಿಕೇರಿ: ಕರ್ನಾಟಕ ರಾಜ್ಯ ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾದ ಕೆ.ಎನ್.ರಾಜಣ್ಣ, ಸದಸ್ಯರಾದ ಗೋವಿಂದ ಎಂ.ಕಾರಜೋಳ, ಲಕ್ಷ್ಮಣ ಎಸ್. ಸವದಿ, ಎಸ್.ಟಿ.ಸೋಮಶೇಖರ್, ಬಿ.ಎ.ಮೊಹಿದ್ದೀನ್ ಬಾವ, ಎಸ್.ಚಿಕ್ಕಮಾದು, ಮಾನಪ್ಪ ಡಿ.ವಜ್ಜಲ್ ಅವರ ತಂಡವು ಹಾರಂಗಿ ಮತ್ತು ಹೇಮಾವತಿ ಅಣೆಕಟ್ಟು ಜಲಾಶಯ ಹಿನ್ನೀರಿನ ಪ್ರದೇಶವಾದ ಸೋಮವಾರಪೇಟೆ ತಾಲ್ಲೂಕಿನ ಜನಾರ್ದನ ಹಳ್ಳಿ, ಮಾವಿನಹಳ್ಳಿ, ಮಾಗಡಿ ಹಳ್ಳಿ, ಹಿಪ್ಪ್ಪಗಳಲೆ ಹಾಗೂ ಹೊನ್ನೆಕೋಡಿ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು.
ಈ ಗ್ರಾಮಗಳು ಶೀತದಿಂದಾಗಿ ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ ಹಾಗೂ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂಬ ಉದ್ದೇಶದಿಂದ 2006ರಲ್ಲಿ ಅಂದಿನ ವಿಧಾನಸಭಾ ಸದಸ್ಯರಾದ ಬಿ.ಎ.ಜೀವಿಜಯ ಅವರು ಚುಕ್ಕೆ ಗುರುತಿನ ಪ್ರಶ್ನೆಯನ್ನು ಕೇಳಿದ್ದರು. ಈ ಹಿನ್ನೆಲೆ ಸಮಿತಿಯ ಸದಸ್ಯರು ಭೇಟಿ ನೀಡಿ ಗ್ರಾಮದ ಸ್ಥಳೀಯರಿಂದ ಮಾಹಿತಿ ಪಡೆದರು. ಸಮಿತಿಯ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಮತ್ತು ತಂಡದ ಸದಸ್ಯರು ಜನಾರ್ದನ ಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರು ಮಾತನಾಡಿ ಮಳೆಗಾಲದ ಅವಧಿಯಲ್ಲಿ ಈ ಭಾಗದಲ್ಲಿ ವಾಸ ಮಾಡಲು ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ ಕನಿಷ್ಠ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ಜನಾರ್ದನ ಹಳ್ಳಿಯಲ್ಲಿ 60 ಕುಟುಂಬಗಳಿದ್ದು, 1975 ರಲ್ಲಿ ಈ ಪ್ರದೇಶ ಮುಳುಗಡೆಯಾಗಿತ್ತು, ಇಲ್ಲಿನ ಸ್ಥಳೀಯರಿಗೆ ಜಮೀನಿನ ಪಟ್ಟೆ ಇಲ್ಲದೆ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸದ್ಯ ಸ್ವಾಧೀನದಲ್ಲಿರುವ ಅರ್ಧ ಎಕರೆ, ಒಂದು ಎಕರೆ ಭೂಮಿಯನ್ನು ಬಿಟ್ಟು ಹೊರ ಹೋಗಲೂ ಸಹ ಆಗುತ್ತಿಲ್ಲ, ಆದ್ದರಿಂದ ಕುಡಿಯುವ ನೀರು, ರಸ್ತೆ, ಚರಂಡಿ ಮತ್ತಿತರ ಕನಿಷ್ಠ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದು ಸ್ಥಳೀಯರೊಬ್ಬರು ಕೋರಿದರು.
ಹೇಮಾವತಿ ಅಣೆಕಟ್ಟು ಹಿನ್ನೀರಿನ ಪ್ರದೇಶಗಳು ಬೇಸಿಗೆ ಅವಧಿಯಲ್ಲಿ ಬರದಂತೆ ಕಾಣುತ್ತವೆ. ಆದರೆ ಜೂನ್ ನಿಂದ ಆಗಸ್ಟ್ ತಿಂಗಳವರೆಗೆ ಇಲ್ಲಿನ ಗ್ರಾಮಸ್ಥರ ಬದುಕು ಮೂರಾಬಟ್ಟೆ ಆಗುತ್ತದೆ. ಆದ್ದರಿಂದ ಈ ಗ್ರಾಮಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಮತ್ತೊಬ್ಬ ಸ್ಥಳೀಯರು ಅವಲತ್ತುಕೊಂಡರು. ಬಳಿಕ ಮಾತನಾಡಿದ ವಿಧಾನಸಭೆ ಸರ್ಕಾರಿ ಭರವಸೆ ಸಮಿತಿ ಅಧ್ಯಕ್ಷರಾದಕೆ.ಎನ್.ರಾಜಣ್ಣ ಅವರು ಅಲ್ಪಸ್ವಲ್ಪ ಭೂಮಿ ಇರುವ ಕುಟುಂಬಗಳು ಸ್ಥಳಾಂತರವಾಗಲು ಇಷ್ಟವಿಲ್ಲ. ಆದ್ದರಿಂದ ಈಗಿರುವ ಸ್ಥಳದಲ್ಲಿಯೇ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು. ಹಾಗೆಯೇ ಭೂಮಿ ಇಲ್ಲದ ಕುಟುಂಬಗಳು ಸ್ಥಳಾಂತರವಾಗಲು ಸಿದ್ದವಿದ್ದು, ಅಂತಹ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸಮಿತಿ ಶಿಫಾರಸು ಮಾಡಲಿದೆ ಎಂದು ಅವರು ತಿಳಿಸಿದರು.
ಸಮಿತಿ ಸದಸ್ಯರಾದ ಗೋವಿಂದ ಎಂ.ಕಾರಜೋಳ ಅವರು ಮಾತನಾಡಿ ಎಸ್.ಸಿಪಿ/ಟಿ.ಎಸ್.ಪಿ ಯೋಜನೆಯಡಿ ಅನುದಾನವಿದ್ದು, ಈ ಹಣವನ್ನು ಬಳಸಿಕೊಳ್ಳಬಹುದಾಗಿದೆ. ಕುಡಿಯುವ ನೀರು, ಸಮುದಾಯ ಭವನ, ಕಾಂಕ್ರೀಟ್ ರಸ್ತೆ, ಸ್ಮಶಾನ ಭೂಮಿ ಈ ರೀತಿ ಬೇಡಿಕೆಗಳಿದ್ದು, ಇವುಗಳನ್ನು ಒದಗಿಸಲು ಕ್ರಮವಹಿಸಬಹುದಾಗಿದೆ ಎಂದರು.
ಲಕ್ಷ್ಮಣ ಎಸ್.ಸವದಿ ಅವರು ಮಾತನಾಡಿ ಹೇಮಾವತಿ ಅಣೆಕಟ್ಟು ಹಿನ್ನೀರಿನ ಪ್ರದೇಶದ ಗ್ರಾಮಸ್ಥರಿಗೆ ಹಲವು ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸಮಿತಿ ಶಿಫಾರಸ್ಸು ಮಾಡಲಿದೆ ಎಂದು ಅವರು ಹೇಳಿದರು. ಇದಕ್ಕೂ ಮೊದಲು ದುಬಾರೆಯ ವಿಹಾರಧಾಮದಲ್ಲಿ ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಕಾರ್ಯದರ್ಶಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರು ಮಾತನಾಡಿ 2006ರಲ್ಲಿ ಶಾಸಕರಾಗಿದ್ದ ಜೀವಿಜಯ ಅವರು ಸೋಮವಾರಪೇಟೆ ತಾಲ್ಲೂಕಿನ ಹಾರಂಗಿ ಮತ್ತು ಹೇಮಾವತಿ ಅಣೆಕಟ್ಟು ಹಿನ್ನೀರಿನ ಕೆಲವು ಗ್ರಾಮಗಳು ಶೀತದಿಂದ ಆವೃತ್ತವಾಗಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ ಎಂದು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದರು. ಆ ಸಂದರ್ಭದಲ್ಲಿ ಕಂದಾಯ ಸಚಿವರು ಪುನರ್ವಸತಿಗೆ ಭರವಸೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಈಗಾಗಲೇ 5.85 ಎಕರೆ ಭೂಮಿ ಸರ್ಕಾರದಲ್ಲಿದ್ದು, ಈ ಭೂಮಿ ಅರಣ್ಯ, ಕಂದಾಯ, ನೀರಾವರಿ ಹೀಗೆ ಯಾವ ಇಲಾಖೆ ಅಧೀನದಲ್ಲಿದೆ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶಿವಶಂಕರ ಅವರು ಜನಾರ್ಧನ, ಮಾವಿನಹಳ್ಳಿ, ಮಾಗಡಿ ಹಳ್ಳಿ, ಹಿಪ್ಪಗಳಲೆ, ಹೊನ್ನೆಕೋಡಿಯ ಕುಟುಂಬಗಳನ್ನು ಸ್ಥಳಾಂತರ ಮಾಡುವುದಿಲ್ಲ ಎಂದು ಅವರು ತಿಳಿಸಿದರು. ಮಧ್ಯ ಪ್ರವೇಶಿಸಿದ ಗೋವಿಂದ ಎಂ.ಕಾರಜೋಳ ಅವರು ಗ್ರಾಮದ ಕುಟುಂಬಗಳನ್ನು ಸ್ಥಳಾಂತರ ಮಾಡದಿದ್ದ ಮೇಲೆ ಭೂಮಿಯನ್ನು ಕಾಯ್ದಿರಿಸುವ ಉದ್ದೇಶವಾದರೂ ಏನು ಎಂದು ಅವರು ಪ್ರಶ್ನಿಸಿದರು. ಆದ್ದರಿಂದ ವಾಸ್ತವ ಮಾಹಿತಿಯನ್ನು ಒದಗಿಸುವಂತೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎನ್.ರಾಜಣ್ಣ ಅವರು ಗ್ರಾಮಸ್ಥರಿಂದ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸಬಹುದಾಗಿದೆ ಎಂದು ಅವರು ತಿಳಿಸಿದರು. ಅರಣ್ಯ ಇಲಾಖೆಯ ಕಾರ್ಯದರ್ಶಿ ರಾಮಚಂದ್ರ ಅವರು 5.85 ಎಕರೆ ಭೂಮಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಹಿನ್ನೀರು ಪ್ರದೇಶದ ಗ್ರಾಮಗಳಲ್ಲಿ ಶೀತದಿಂದ ಉಂಟಾಗಬಹುದಾದ ರೋಗಗಳ ಬಗ್ಗೆ ಮಾಹಿತಿ ಇದೆಯೇ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಡಿ.ಎಚ್.ಒ.ಡಾ.ಒ.ಆರ್.ಶ್ರೀರಂಗಪ್ಪ ಅವರು ಈ ಗ್ರಾಮಗಳಲ್ಲಿ ಶೀತದಿಂದ ಉಂಟಾಗಬಹುದಾದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯ ರೋಗಗಳು ಇದುವರೆಗೆ ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಎಂ.ಎಸ್.ಕ್ಷಮ, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ತಹಶೀಲ್ದಾರ್ ಕೃಷ್ಣ, ಜಿ.ಪಂ.ಸಹಾಯಕ ಕಾರ್ಯದರ್ಶಿ, ತಾ.ಪಂ.ಇಒ ಸತ್ಯನಾರಾಯಣ, ಇತರರು ಇದ್ದರು.