ಮಡಿಕೇರಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ತಂಡ ಕೊಡಗು ಜಿಲ್ಲೆಯ ವಿವಿಧ ರೆಸಾರ್ಟ್ ಗಳಿಗೆ ದಿಢೀರ್ ದಾಳಿ ನಡೆಸಿ ಜಲಮೂಲಗಳ ರಕ್ಷಣೆಗೆ ಮುಂದಾಗಿದೆ. ಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ್ ಅವರು ಮಂಡಳಿಯ ಸದಸ್ಯರಾದ ಜೋಗೀರ ಜಿ.ಕಾವೇರಿಯಪ್ಪ ಮತ್ತು ಹಿರಿಯ ಅಧಿಕಾರಿಗಳು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ವಿವಿಧ ರೆಸಾರ್ಟ್ ಗಳಿಗೆ ದಿಢೀರ್ ಭೇಟಿ ನೀಡುವುದರೊಂದಿಗೆ ಜೀವನದಿ ಕಾವೇರಿ ತವರು ನಾಡಿನಲ್ಲಿ ಜಲಮೂಲಗಳ ರಕ್ಷಣೆ ಮಾಡಲು ಕಾರ್ಯಾಚರಣೆ ನಡೆಸಿದೆ.
ತವರೂರಲ್ಲೇ ಕಾವೇರಿ ನದಿ ಮಾಲಿನ್ಯಗೊಳ್ಳುತ್ತಿರುವ ಬಗ್ಗೆ ಮಂಡಳಿಗೆ ಬಂದಿರುವ ದೂರಿನ ಹಿನ್ನಲೆಯಲ್ಲಿ ಜಿಲ್ಲೆಗೆ ಭೇಟಿ ನೀಡಿರುವ ತಂಡ ಶನಿವಾರ ಮಡಿಕೇರಿಯ ಕೆಲವೆಡೆ ಹಾಗೂ ಭಾನುವಾರ ಭಾಗಮಂಡಲ, ತಲಕಾವೇರಿ, ಕಕ್ಕಬೆ ವ್ಯಾಪ್ತಿಯಲ್ಲಿ ರೆಸಾರ್ಟ್ ಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಹಲವೆಡೆ ಬೃಹತ್ ವಾಣಿಜ್ಯ ಕಟ್ಟಡಗಳು ತಲೆ ಎತ್ತುವುದರೊಂದಿಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದು ಇನ್ನೊಂದೆಡೆ ನದಿ ತಟಗಳಲ್ಲಿ ಅಕ್ರಮ ರೆಸಾರ್ಟ್ ಗಳು ತಲೆ ಎತ್ತುತ್ತಿದ್ದು ಈ ಬಗ್ಗೆ ಮಂಡಳಿಗೆ ದೂರು ಬಂದಿರುವ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಲಕ್ಷ್ಮಣ್ ತಿಳಿಸಿದ್ದಾರೆ.
ಮಂಡಳಿಯ ತಂಡ ಕಕ್ಕಬ್ಬೆಯ ಸಮೀಪ ನಿರ್ಮಾಣಗೊಂಡಿರುವ ತಾಮರ ರೆಸಾರ್ಟ್, ನದಿ ತಟವೊಂದರಲ್ಲಿ ನಿರ್ಮಾಣಗೊಂಡಿರುವ ಜಂಗಲ್ ಮೌಂಟ್ ರೆಸಾರ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಬಹುತೇಕ ರೆಸಾರ್ಟ್ ಗಳು ಪರಿಸರ ಮಾಲಿನ್ಯ ಹಾಗೂ ಹಲವು ಇಲಾಖೆಗಳ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿರುವುದು ಹಾಗೂ ಜಲಮೂಲಗಳ ಸಂಪೂರ್ಣ ದುರ್ಬಳಕೆಯಾಗುತ್ತಿರುವುದಾಗಿ ಲಕ್ಷ್ಮಣ್ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಖಾಸಗಿ ರೆಸಾರ್ಟ್ ಒಂದರಲ್ಲಿ ಘಟ್ಟಗಳಿಂದ ಇಳಿದು ಬರುತ್ತಿರುವ ಝರಿಗಳ ಮಾರ್ಗಗಳಿಗೆ ತಡೆಯೊಡ್ಡಿ ಜಲಮಾರ್ಗವನ್ನೇ ಬದಲಾಯಿಸಲಾಗಿದೆ. ಕೆಲವೆಡೆ ಕಾಂಕ್ರಿಟ್ ತಡೆಗೋಡೆ ನಿರ್ಮಾಣ ಮಾಡಿದ್ದು ಸರಕಾರದ ಕಾಯ್ದೆಯನ್ನು ಸಂಪೂರ್ಣ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಅಧಿಕೃತ ದಾಖಲೆಗಳಿಲ್ಲದೆ ಪರಿಸರ ಹಾನಿಗೆ ಕಾರಣವಾಗಿದ್ದು ಈ ಬಗ್ಗೆ ಇಲಾಖೆಯಿಂದ ನೋಟೀಸ್ ನೀಡಿ ಮುಂದೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಭಯಾರಣ್ಯಗಳ ನಡುವೆ ನಿಯಮ ಉಲ್ಲಂಘಿಸಿ ರೆಸಾರ್ಟ್ ನಿರ್ಮಾಣ, ಜಲಮೂಲಗಳಿಗೆ ತಡೆಯೊಡ್ಡಿರುವುದನ್ನು ತಕ್ಷಣ ತೆರವುಗೊಳಿಸಲು ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ತಾಜ್ಯ ವಸ್ತುಗಳು ಕಲುಷಿತ ನೀರು ನೇರವಾಗಿ ಜಲಮೂಲಗಳಿಗೆ ಸೇರಿ ನದಿಯ ನೀರನ್ನು ಮಾಲಿನ್ಯಗೊಳಿಸುತ್ತಿರುವ ಬಹುತೇಕ ರೆಸಾರ್ಟ್ ಗಳಿಗೆ ತಕ್ಷಣದಿಂದಲೇ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ. ರೆಸಾರ್ಟ್ ಮಾಲೀಕರಿಗೆ ಸಮರ್ಪಕ ದಾಖಲೆಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಇಲ್ಲದೆ ನಿರ್ಮಾಣಗೊಂಡಿರುವ ಬೃಹತ್ ರೆಸಾರ್ಟ್ ಗಳ ಮೇಲೆ ದಾಳಿ ಮುಂದುವರೆಯಲಿದ್ದು ಕಾಯ್ದೆ ಉಲ್ಲಂಘಿಸಿರುವ ಪ್ರಕರಣಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿರುವ ಲಕ್ಷ್ಮಣ್ ಜಲಮೂಲಗಳಿಗೆ ತಡೆಯೊಡ್ಡಿರುವುದನ್ನು ತಕ್ಷಣ ತೆರವುಗೊಳಿಸಲು ಸ್ಥಳದಲ್ಲೇ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೆಲವೆಡೆ ಸರಕಾರಿ ಜಾಗಗಳನ್ನು ಅಕ್ರಮವಾಗಿ ಒತ್ತುವರಿ ಮಾಡುವುದರೊಂದಿಗೆ ಅನಧಿಕೃತ ಕಟ್ಟಡಗಳು ತಲೆ ಎತ್ತಿದ್ದು ಈ ಮೂಲಕ ಜಿಲ್ಲೆಯ ಪರಿಸರ ನಾಶಕ್ಕೆ ಅವಕಾಶ ಕಲ್ಪಿಸಿದಂತಾಗಿದೆ ಎಂದು ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿರುವ ಮಂಡಳಿಯ ಆಡಳಿತ ಸಮಿತಿ ಸದಸ್ಯರಾದ ಜೋಗೀರ ಕಾವೇರಿಯಪ್ಪ, ಇಲಾಖೆಯ ಅಧಿಕಾರಿಗಳು ಜಿಲ್ಲೆಯ ರೆಸಾರ್ಟ್ ಗಳಿಗೆ ಭೇಟಿ ನೀಡಿ ಹಲವೆಡೆ ಶೋಕಾಸ್ ನೋಟೀಸ್ ನೀಡಲಾಗಿದೆ. ನಿಯಮ ಉಲ್ಲಂಘನೆ ಕಂಡಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ತವರಿನಲ್ಲಿ ಕಾವೇರಿ ನದಿ ಕಲುಷಿತಗೊಳಿಸುವ ಪ್ರಕರಣಗಳು ಬೆಳಕಿಗೆ ಬಂದಿದ್ದು ಅಂತಹ ಜನರ ಮೇಲೆ ಪೊಲೀಸ್ ಮೊಕದ್ದಮೆ ಮೂಲಕ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದು, ಜಿಲ್ಲಾಧಿಕಾರಿಗಳೂ ಕೂಡ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆ ಸಂದರ್ಭ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ವಲಯದ ಹಿರಿಯ ಪರಿಸರ ಅಧಿಕಾರಿ ಲಿಂಗರಾಜು, ಕೊಡಗು ಜಿಲ್ಲಾ ಪರಿಸರ ಅಧಿಕಾರಿ ಜಿ.ಗಣೇಶನ್, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್ ಇದ್ದರು.
ಪ್ರವಾಸೋದ್ಯಮದ ಹೆಸರಿನಲ್ಲಿ ರೆಸಾರ್ಟ್ ಸಂಸ್ಕೃತಿಯೊಂದಿಗೆ ಕೊಡಗು ಜಿಲ್ಲೆಯ ಪ್ರಕೃತಿಯ ಅವನತಿಗೆ ಕೆಲವರು ಕಾರಣರಾಗುತ್ತಿದ್ದಾರೆ ಎಂದು ಕಸ್ತೂರಿ ರಂಗನ್ ಸತ್ಯಾನ್ವೇಷಣ ಸಮಿತಿಯ ಅಧ್ಯಕ್ಷರಾದ ಕೆ.ಪಿ.ಸೋಮಣ್ಣ (ಸನ್ನಿ) ಮತ್ತು ಸದಸ್ಯರಾದ ಪಿ.ಜೆ.ನರೇಶ್ ಆರೋಪಿಸಿದ್ದಾರೆ. ಅವರು ಕಕ್ಕಬ್ಬೆಯ ಯುವಕಪಾಡಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಹಾಗೂ ತಂಡವನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಪರಿಸರಕ್ಕೆ ಹಾನಿಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು ಕಕ್ಕಬ್ಬೆ ವ್ಯಾಪ್ತಿಯಲ್ಲಿ ದೇವಾಲಯಗಳು ಹಾಗೂ ನಾಗರೀಕರು ಬಳಸುವ ಜಲಮೂಲಗಳ ದಾರಿಗೆ ತಡೆಯೊಡ್ಡುವುದರೊಂದಿಗೆ ನೀರನ್ನು ಕಲುಷಿತಗೊಳಿಸಿ ಮಾಲಿನ್ಯ ಮಾಡಲಾಗುತ್ತಿದೆ. ಯುವಕಪಾಡಿ ಮರಂದೋಡ ಗ್ರಾಮದ ನಾಗರೀಕರು ಇದರಿಂದ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ದೂರಿದ್ದಾರೆ.
ಅಕ್ರಮಗಳ ಬಗ್ಗೆ ಮಾತೆತ್ತಿದಲ್ಲಿ ವಿನಾಕಾರಣ ಪೊಲೀಸ್ ಮೊಕದ್ದಮೆ ಹೂಡುತ್ತಿರುವ ಬಗ್ಗೆ ಅವರು ತಿಳಿಸಿದ್ದು ಈ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ವನ್ಯ ಸಂಪತ್ತು, ಜಲಸಂಪತ್ತು ಸಂಪೂರ್ಣ ನಾಶಗೊಳ್ಳುವ ಆಂತಕ ವ್ಯಕ್ತಪಡಿಸಿದ್ದಾರೆ.