ಗುಂಡ್ಲುಪೇಟೆ: ಸ್ವಜಾತಿಯವರಿಂದಲೇ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿದ್ದ ವ್ಯಕ್ತಿಯೊಬ್ಬ ವಿಷ ಸೇವಿಸಿರುವ ಘಟನೆ ತಾಲೂಕಿನ ಬೇರಂಬಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗೋಪಾಲಯ್ಯ(55)ಎಂಬಾತನಿಗೆ ಗ್ರಾಮಪಂಚಾಯಿತಿ ವತಿಯಿಂದ ನೀಡಿದ್ದ ನಿವೇಶನದಲ್ಲಿ ಸಾರ್ವಜನಿಕರು ಓಡಾಡಲು ರಸ್ತೆಗೆ ಬಿಟ್ಟುಕೊಡುವಂತೆ ಗ್ರಾಮದ ಮುಖಂಡರು ಆತನ ಮೇಲೆ ಮೊದಲಿನಿಂದಲೂ ಒತ್ತಡ ಹೇರುತ್ತಿದ್ದರು. ಇದಕ್ಕೆ ಒಪ್ಪದಿದ್ದಾಗ ಕಳೆದ ತಿಂಗಳು ಜನಾಂಗದ ವತಿಯಿಂದ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಈ ಬಗ್ಗೆ ಗೋಪಾಲನಾಯ್ಕನ ಅಳಿಯ ಕರಿಯಯ್ಯ ಎಂಬುವರು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಗ್ರಾಮದ ಎಲ್ಲಾ ಜನಾಂಗಗಳ ಮುಖಂಡರು ಗೋಪಾಲಯ್ಯನ ಮನೆಯನ್ನು ಉರುಳಿಸಲು ಮುಂದಾಗಿದ್ದಾಗ ತಡೆಯುವಲ್ಲಿ ವಿಫಲವಾದ ಅವರು ಮನನೊಂದು ಕ್ರಿಮಿನಾಶಕ ಸೇವಿಸಿ ಅಸ್ವಸ್ಥರಾದರು. ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರಿಗೆ ಕರೆದೊಯ್ಯಲಾಯಿತು.
ಈ ಸಂಬಂಧ ಪಟ್ಟಣ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.