ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲದಲ್ಲಿ ಜಿಂಕೆ ಹಾಗೂ ಕಡವೆಗಳ ಬುರುಡೆ ಮತ್ತು ಕೊಂಬುಗಳನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದೆ.
ಚಿಕ್ಕಲ್ಲೂರು ಸಮೀಪದ ರಾಚಪ್ಪಾಜಿ ಗ್ರಾಮದ ನಿವಾಸಿಗಳಾದ ಜಡೆಯ ಅಲಿಯಾಸ್ ಸ್ವಾಮಿ(26) ಶಿವಮಲ್ಲು935) ಹಾಗೂ ಶಿವಣ್ಣ(35) ಬಂಧಿತ ಆರೋಪಿಗಳು.
ಇವರು ಮೂವರು ಸೇರಿ ಜಿಂಕೆ ಮತ್ತು ಕಡವೆ ಕೊಂಬುಗಳನ್ನು ಮಾರಾಟ ಮಾಡುವ ಸಲುವಾಗಿ ಬೇರೆಡೆಗೆ ಬೈಕ್ನಲ್ಲಿ ಸಾಗಾಣಿಕೆ ಮಾಡಲು ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ದಾಳಿ ನಡೆಸಿ ಮಾಲು ಸಮೇತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ತಲೆ ಮೂಳೆ ಸಹಿತ ಕಡವೆ ಕೊಂಬುಗಳು, ಒಂದು ಕಡವೆ ಕೊಂಬು ಹಾಗೂ ಮೂರು ಜಿಂಕೆಗಳ ಕೊಂಬುಗಳು ಮತ್ತು ಇದರ ಸಾಗಾಣಿಕೆಗೆ ಬಳಸಿದ್ದ ಬಜಾಜ್ ಡಿಸ್ಕವರ್ ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಅಕ್ರಮವಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಅದರ ಕೊಂಬುಗಳನ್ನು ಬೇರ್ಪಡಿಸಿ ಅವುಗಳನ್ನು ಮಾರಾಟ ಮಾಡಿ ಅಡ್ಡ ದಾರಿಯಲ್ಲಿ ಹಣ ಸಂಪಾದಿಸುವ ಇರಾದೆಯಲ್ಲಿದ್ದರು ಎಂದು ಹೇಳಲಾಗಿದೆ. ಇದಕ್ಕಾಗಿ ಅವರು ಚಿಕ್ಕಲ್ಲೂರಿನ ಜಾತ್ರೆ ಮೈದಾನಕ್ಕೆ ಮಾಲು ತಂದು ಸಾಗಾಣಿಕೆಗೆ ತಯಾರಿ ನಡೆಸಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.