ಬೆಂಗಳೂರು: ರಾಜ್ಯದ ಅಗ್ನಿಶಾಮಕ ದಳಕ್ಕೆ ದೊಡ್ಡ ಶಕ್ತಿಯನ್ನು ತುಂಬುವ ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ಬಹಳ ದೊಡ್ಡ ಕೊಡುಗೆಯನ್ನು ನೀಡುವ ಪ್ರಮುಖ ದಿನವಿದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯ ವತಿಯಿಂದ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಆಯೋಜಿಸಿದ್ದ 90 ಮೀಟರ್ ಏರಿಯಲ್ ಲ್ಯಾಡರ್ ಪ್ಲಾಟ್ಫಾರಂ ವಾಹನ ಲೋಕಾರ್ಪಣೆ ಹಾಗೂ ‘ಹಸಿರು ದೀಪಾವಳಿ ಸಾರ್ವಜನಿಕ ಜಾಗೃತಿ ಜಾಥಾ’ಕ್ಕೆ ಚಾಲನೆ ನೀಡಿ ಮಾತನಾಡಿ, 90 ಮೀಟರ್ ಏರಿಯಲ್ ಏಣಿ ಪ್ರಮುಖವಾದ, ಅತ್ಯಗತ್ಯವಾದ ಸೇವೆ. ಆಧುನಿಕ ಏಣಿಗಳು ಆಪತ್ಕಾಲದಲ್ಲಿ ಬಂಧುಗಳಂತೆ ಕೆಲಸ ಮಾಡುತ್ತವೆ. ನಾಗರಿಕತೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜಗತ್ತಿನಾದ್ಯಂತ ಬೆಳೆಯುತ್ತಿದೆ. ಎಲ್ಲ ಪ್ರಮುಖ ಮೆಟ್ರೋ ನಗರಗಳಲ್ಲಿ ಇದು ಅತ್ಯಂತ ಅವಶ್ಯಕ ಸೇವೆ. ಇದಿಲ್ಲದೆ ಕಟ್ಟಡಗಳಿಗೆ ಅನುಮತಿ ನೀಡುವುದಿಲ್ಲ. ಅಗ್ನಿ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತಾ ನಿಯಮಗಳೂ ಹಾಗೂ ಎತ್ತರದ ಕಟ್ಟಡ ಕಟ್ಟಲು ಅಪತ್ಕಾಲದಲ್ಲಿ ನಿಭಾಯಿಸುವ ಸಲುವಾಗಿ ಅಗ್ನಿಶಾಮಕ ದಳದ ಎಲ್ಲಾ ನಿಯಮಗಳನುಸಾರವಾಗಿ ವ್ಯವಸ್ಥೆ ಇರುವುದು ಮುಖ್ಯ ಎಂದರು.
ಬೆಂಗಳೂರಿನ ಅಗ್ನಿಶಾಮಕ ದಳಕ್ಕೆ 50 ಮೀಟರಿನ ಏಣಿ ಇತ್ತು. ಇಂದು ಬೆಂಗಳೂರು ನಗರ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಲಂಬವಾಗಿಯೂ ಬೆಳೆಯುತ್ತಿದೆ. ಎತ್ತರದ ಕಟ್ಟಡಗಳನ್ನು ಕಟ್ಟಲು ಇದರ ಅವಶ್ಯಕತೆ ಇದೆ. ವ್ಯವಸ್ಥೆ ಗಳಿಲ್ಲದಿದ್ದರೆ ಎತ್ತರದ ಕಟ್ಟಡಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಭಾರತ ದೇಶದಲ್ಲಿ ಮುಂಬೈ ಮಹಾನಗರದಲ್ಲಿ 90 ಮೀಟರ್ ಏಣಿ ಇದೆ. ಮುಂಬೈ ಬಿಟ್ಟರೆ ಬೆಂಗಳೂರಿನಲ್ಲಿ ಮಾತ್ರ ಈ ವ್ಯವಸ್ಥೆ ಇದೆ. ಸುಮಾರು ಎರಡೂವರೆ ವರ್ಷಗಳಿಂದ ಇದನ್ನು ಪಡೆದುಕೊಳ್ಳುವ ಪ್ರಯತ್ನ ನಡೆದಿತ್ತು. ನಾನು ಹಿಂದೆ ಗೃಹ ಸಚಿವನಿದ್ದ ಸಂದರ್ಭದಲ್ಲಿ ಇದಕ್ಕೆ ಆದೇಶ ನೀಡಿ ಅನುದಾನವೂ ಬಿಡುಗಡೆಯಾಗಿತ್ತು. ಕಾರಣಾಂತರಗಳಿಂದ ವಿಳಂಬವಾಯಿತು. ಕೋವಿಡ್ ಮತ್ತು ಉತ್ಪಾದನೆಯ ಸಮಸ್ಯೆಯಾಗಿ ತಡವಾಗಿದೆ. ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ತನ್ನ ಸೇವೆಯನ್ನು ನೀಡಲು ಸಿದ್ಧವಾಗಿರುವುದು ಸಂತಸದ ಸಂಗತಿ ಎಂದರು.
ಬೆಂಗಳೂರು ದೊಡ್ಡ ನಗರವಾಗಿ ಬೆಳೆಯುತ್ತಿದೆ. ವಿಚಾರಗಳನ್ನು ತಿಳಿದುಕೊಳ್ಳದೆ ಹಲವಾರು ವ್ಯಾಖ್ಯಾನಗಳು ಆಗುತ್ತಿರುವುದು ಸರಿಯಲ್ಲ. ಮೊನ್ನೆ ಬಂದ ಮಳೆಗೆ ಎರಡು ಕ್ಷೇತ್ರದಲ್ಲಿ ಮಾತ್ರ ಪ್ರವಾಹವಾಗಿತ್ತು. 26 ಕ್ಷೇತ್ರಗಳಲ್ಲಿ ಪ್ರವಾಹ ಇರಲಿಲ್ಲ. ಆದರೆ ಇಡೀ ಬೆಂಗಳೂರು ಮುಳುಗಿದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಯಿತು. ಬೆಂಗಳೂರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖವಾದ ನಗರ. ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸುವ ಸಾಮಥ್ರ್ಯ ನಮ್ಮ ಸರ್ಕಾರಕ್ಕಿದೆ. ಆದ್ದರಿಂದ ಇದನ್ನು ಸರಿಯಾದ ರೀತಿಯಲ್ಲಿ ಬಿಂಬಿಸುವ ಅಗತ್ಯವಿದೆ ಎಂದರು.
ಪ್ರವಾಹ ಪರಿಸ್ಥಿತಿ ನಿಭಾಯಿಸಲು ತಕ್ಷಣ ಧಾವಿಸಿದ್ದು ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ. ಆರ್.ಎಫ್ ತಂಡಗಳು. ಬೆಂಗಳೂರಿನಲ್ಲಿ ಎಸ್.ಡಿ.ಆರ್.ಎಫ್.ನಡಿ ನೂರಕ್ಕಿಂತ ಹೆಚ್ವು ಯೋಧರು ಇದ್ದಾರೆ. ಯಾವುದೇ ಭಾಗದಲ್ಲಿ ಏನೇ ಆದರೂ ರಕ್ಷಣೆ ಮಾಡುವ ಸಾಮಥ್ರ್ಯ ಈ ತಂಡಕ್ಕಿದೆ. ನೂತನ ಸಲಕರಣೆಗಳನ್ನು ಸರ್ಕಾರ ಈಗಾಗಲೇ 20 ಕೋಟಿ ನೀಡಿದ್ದು, ಪುನಃ 20 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಎಸ್.ಡಿ.ಆರ್.ಎಫ್ ಬಲಪಡಿಸುವುದು ನಮ್ಮ ಉದ್ದೇಶ ಎಂದರು.
ಅಗ್ನಿಶಾಮಕ ದಳದ ಸಬಲೀಕರಣಕ್ಕೆ ಹಲವಾರು ಯೋಜನೆಗಳಿಗೆ ನಮ್ಮ ಸರ್ಕಾರ ಅನುಮತಿಗಳನ್ನು ನೀಡಿದೆ. ಏರಿಯಲ್ ಏಣಿ ಕೂಡ ಇದರಲ್ಲಿ ಒಂದು. 90 ಮೀಟರ್ ಎತ್ತರದಲ್ಲಿ ಯಾವುದೇ ಅವಘಡ ಸಂಭವಿಸಿದರೂ ಅದನ್ನು ರಕ್ಷಿಸುವ ಸಾಮಥ್ರ್ಯ ಅಗ್ನಿಶಾಮಕ ದಳಕ್ಕಿದೆ. ಇದು ಬೇರೆ ಯಾವ ನಗರಗಳಲ್ಲಿ ಇಲ್ಲ ಎಂದು ಹೇಳಿದರು.
ಅಗ್ನಿಶಾಮಕ ದಳಕ್ಕೆ ಪ್ರಬಲ ಅಸ್ತ್ರ ದೊರೆತಿರುವ ಪ್ರಮುಖ ದಿನ. ಸುರಕ್ಷತೆಯ ದೃಷ್ಟಿಯಿಂದ ಇದು ಬಹಳ ಉಪಯೋಗಿಯಾಗಲಿದೆ. ಅತಿ ಕಡಿಮೆ ಸಮಯದಲ್ಲಿ ಅಪಘಾತವನ್ನು ತಡೆಯಬಹುದಾದ ಕೆಲಸ ಮಾಡಲಾಗುವುದು. ಅಮರ್ ಪಾಂಡೆ ಅವರು ಇದಕ್ಕೆ ಶ್ರಮವಹಿಸಿದ್ದಾರೆ. ತಾಂತ್ರಿಕವಾಗಿ, ಆಡಳಿತಾತ್ಮಕವಾಗಿ ಕ್ರಮಗಳನ್ನು ಜರುಗಿಸಿದ್ದಾರೆ. ಜನರಿಗಾಗಿ ಇದು ಸಮರ್ಪಕವಾಗಿ ಬಳಕೆಯಾಗಲಿ ಎಂದು ತಿಳಿಸಿದರು.
ದೀಪಾವಳಿ ಹಬ್ಬ ನಾಡಿನ ಸಮಸ್ತರಿಗೂ ಬೆಳಕು ತರಲಿ. ಜಾಗು ಪರಿಸರ ಉಳಿಸುವ ಸಲುವಾಗಿ ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ. ಶಬ್ಧ ಹಾಗೂ ವಾಯು ಮಾಲಿನ್ಯ ತಡೆಯೋಣ, 125 ಡೆಸಿಬಿಲ್ಗಿಂತ ಕಡಿಮೆ ಇರುವ ಪಟಾಕಿಗಳನ್ನು ಬಳಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಸಂಸದ ಪಿ.ಸಿ. ಮೋಹನ್, ಶಾಸಕ ನಿರಂಜನ್, ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಗೃಹರಕ್ಷಕ ದಳದ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾ ಸಮಾದೇಷ್ಟರು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರು ಹಾಗೂ ಎಸ್.ಡಿ.ಆರ್.ಎಫ್ನ ಮಹಾನಿರ್ದೇಶಕರಾದ ಡಾ.ಅಮರ್ ಕುಮಾರ್ ಪಾಂಡೆ ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.