ಬೆಂಗಳೂರು: ಮಾರಕಾಸ್ತ್ರಗಳನ್ನು ಝಳಪಿಸಿ ಜನರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿ ಸುಹೇಲ್ ಅಲಿಯಾಸ್ ಪಪ್ಪಾಯಿಯನ್ನು ಬಂಧಿಸಿರುವ ದೇವರ ಜೀವನ ಹಳ್ಳಿ (ಡಿ ಜೆ ಹಳ್ಳಿ) ಪೊಲೀಸರು, ಆತನ ಕೈಗೆ ಕೋಳ ಹಾಕಿಸಿ ಈತನು ದಾಂಗುಡಿಯಿಡುತಿದ್ದ ಪ್ರದೇಶದಲ್ಲಿ ಮೆರವಣಿಗೆ ಮಾಡಿ ಜನತೆಯಲ್ಲಿ ಧೈರ್ಯ ತುಂಬಿದ್ದಾರೆ.
‘ಸ್ಥಳೀಯ ನಿವಾಸಿ ಆಗಿರುವ ಸುಹೇಲ್, ಅಪರಾಧ ಹಿನ್ನೆಲೆಯುಳ್ಳವನಾಗಿದ್ದು . ತನ್ನದೇ ಪ್ರತ್ಯೇಕ ತಂಡವನ್ನು ಕಟ್ಟಿಕೊಂಡು ಸುಲಿಗೆ ಮಾಡುತ್ತಿದ್ದ. ರಾತ್ರಿ ಒಬ್ಬಂಟಿಯಾಗಿ ಓಡಾಡುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುವುದೇ ಅಲ್ಲದೆ ಡಿ.ಜೆ. ಹಳ್ಳಿಯ ಹಲವು ಅಂಗಡಿ- ವ್ಯಾಪಾರಿಗಳ ಮಳಿಗೆಗಳಿಗೆ ಹೋಗಿ ಹಣ ವಸೂಲಿ ಮಾಡುತ್ತಿದ್ದ. ಹಣ ನೀಡದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಈತನ ‘ರೌಡಿ ವರ್ತನೆಯಿಂದ ಜನರೆಲ್ಲ ಬೇಸತ್ತಿದ್ದರು. ಭಯದಲ್ಲಿ ಬದುಕುತ್ತಿದ್ದರು. ಇತ್ತೀಚಿಗೆ ನಡೆದಿದ್ದ ಅಪರಾಧ ಪ್ರಕರಣದಲ್ಲಿ ಸುಹೇಲ್ನನ್ನು ಬಂಧಿಸಲಾಯಿತು’ ಎಂದು ತಿಳಿಸಿವೆ.
‘ಆರೋಪಿ ನೋಡಿದರೆ ಜನರು ಭಯಪಡುತ್ತಿದ್ದರು. ಅವರಲ್ಲಿ ಧೈರ್ಯ ಮೂಡಿಸುವುದಕ್ಕಾಗಿ, ರೌಡಿಗೆ ಕೈ ಕೋಳ ಹಾಕಿ ರಸ್ತೆಯಲ್ಲಿ ಕರೆದೊಯ್ಯಲಾಯಿತು. ಜನರಿಗೆ ಕೈ ಮುಗಿಸಿ, ಇನ್ನೊಮ್ಮೆ ಇಂಥ ಕೃತ್ಯ ಮಾಡುವುದಿಲ್ಲವೆಂದು ಹೇಳಿಸಲಾಯಿತು. ನಿಮ್ಮ ಜೊತೆ ಪೊಲೀಸರು ಇದ್ದಾರೆ. ಯಾವುದೇ ಕಾರಣಕ್ಕೂ ರೌಡಿಗಳಿಗೆಲ್ಲ ಹೆದರಬೇಡಿ ,ನಿರ್ಬೀತಿಯಿಂದ ಜೀವನ ನಡೆಸಿ ,ಪೋಲೀಸರು ನಿಮ್ಮ ಜತೆಗಿದ್ದಾರೆ ಎಂದು ಜನರನ್ನು ಧೈರ್ಯ ತುಂಬಲಾಯಿತು’ ಎಂದೂ ಸ್ಥಳೀಯರು ತಿಳಿಸಿದರು.