ರಾಮನಗರ: ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿದ ಕೀರ್ತಿ ರಾಮನಗರ ಜಿಲ್ಲೆಗೆ ಸಲ್ಲುತ್ತದೆ. ರೇಷ್ಮೆ ನಗರಿ ರಾಮನಗರ ತನ್ನದೇ ಆದ ರಾಜಕೀಯ ಹಿನ್ನೆಲೆ ಹೊಂದಿದೆ. ಇದೇ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣಾ ಕಹಳೆ ಮೊಳಗಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಹಿಡಿತ ಸಾಧಿಸಿದ್ದು, ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ಸಜ್ಜಾಗಿದೆ.
ಈ ನಡುವೆ ಬಿಜೆಪಿ ಕೂಡ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತವರು ಕ್ಷೇತ್ರ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಲಿ ಶಾಸಕಿ. ಮುಂಬರುವ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ದಂಪತಿ ಪುತ್ರ ನಿಖಿಲ್ ಕುಮಾರಸ್ವಾಮಿ ನಿರ್ಧರಿಸಿದ್ದು, ನಿಖಿಲ್ಗೆ ಫೈಟ್ ನೀಡಲು ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ಧತೆ ನಡೆಸಿವೆ.
ಕಳೆದ ಬಾರಿ ರಾಮನಗರ-ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರು ಗೆದ್ದ ನಂತರ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಅವರ ಪತ್ನಿ ಅನಿತಾ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇತ್ತೀಚಿಗೆ ನಡೆದ ಪಂಚರತ್ನ ರಥಯಾತ್ರೆ ವೇಳೆ ‘ನಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕುತ್ತೇವೆ ಎಂದು ಹೇಳುವ ಮೂಲಕ ಕುಮಾರ ಸ್ವಾಮಿ ರಾಮನಗರ ವಿಧಾನಸಭಾ ಕ್ಷೇತ್ರದ ಟಿಕೇಟ್ ಘೋಷಣೆ ಮಾಡಿದ್ದರು. ಟಿಕೆಟ್ ಘೋಷಣೆಯಾದ ನಂತರ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಾದ್ಯಂತ ಸಂಚರಿಸಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಅವರಿಗೆ ಪೈಪೋಟಿ ನೀಡಲು ಕಾಂಗ್ರೆಸ್ ನಿಂದ ಇಕ್ಬಾಲ್ ಹುಸೇನ್ ಕಣಕ್ಕೆ ಇಳಿಯಲಿದ್ದು, ಬಿಜೆಪಿಯಿಂದ ಗೌತಮ್ ಗೌಡ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.
2018ರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ 20 ಸಾವಿರ ಮತಗಳಿಂದ ಸೋತಿದ್ದ ಇಕ್ಬಾಲ್ ಹುಸೇನ್ ಈ ಬಾರಿ ಗೆಲ್ಲುವ ಆಸೆ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದು, ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್, ಔಷಧಿ ಕಿಟ್ ವಿತರಣೆ ಸೇರಿದಂತೆ ಇತರೆ ಸಾಮಾಜಿಕ ಸೇವೆ ಮಾಡುವ ಮೂಲಕ ಕ್ಷೇತ್ರದ ಜನರೊಂದಿಗೆ ನಿಂತಿರುವುದು ಅವರಿಗೆ ಶಕ್ತಿ ತುಂಬಿದೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಪ್ರೀತಿಗೆ ಪಾತ್ರರಾದರು. ಆಂತರಿಕ ಭಿನ್ನಾಭಿಪ್ರಾಯ ಬಿಟ್ಟು ಅವರ ಗೆಲುವಿಗೆ ಶ್ರಮಿಸುವುದಾಗಿ ಪಕ್ಷದ ಮುಖಂಡರು ಇಕ್ಬಾಲ್ ಹುಸೇನ್ ಗೆ ಹೇಳಿದ್ದಾರೆ. ಇದು ಅವರಿಗೆ ವರದಾನವಾಗಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಹರಸಾಹಸ ಪಡುತ್ತಿದ್ದ ಬಿಜೆಪಿ ಈ ಬಾರಿ ಉತ್ಸಾಹದಿಂದ ಕಣಕ್ಕೆ ಇಳಿಯಲು ನಿರ್ಧರಿಸಿದೆ. ಹಳೇ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡಿರುವ ಬಿಜೆಪಿ ನಾಯಕರು ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗೌತಮ್ ಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದ್ದರೂ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಈಗಾಗಲೇ ಸಚಿವ ಅಶ್ವತ್ಥನಾರಾಯಣ ಅವರೊಂದಿಗೆ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದಾರೆ. ಹಾಗಾಗಿ ಮೂರು ಪಕ್ಷಗಳಿಂದ ರಾಜಕೀಯ ಲೆಕ್ಕಾಚಾರ ಜೋರಾಗಿದ್ದು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಕ್ಷೇತ್ರದಲ್ಲಿ ಒಟ್ಟು 2,06,982 ಮತದಾರರಿದ್ದಾರೆ. 1,02,938 ಪುರುಷ ಮತದಾರರು ಹಾಗೂ 1,04,019 ಮಹಿಳಾ ಮತದಾರರು ಹಾಗೂ 25 ಇತರೆ ಮತದಾರರಿದ್ದಾರೆ. ಒಕ್ಕಲಿಗ ಸಮುದಾಯವು ಸಂಖ್ಯೆಯಲ್ಲಿ ಮುಂದಿದ್ದು, ಎಸ್ಸಿ-ಎಸ್ಟಿ, ಲಿಂಗಾಯತ, ಅಲ್ಪಸಂಖ್ಯಾತರು ಮತ್ತು ಕುರುಬ ಸಮುದಾಯವು ನಿರ್ಣಾಯಕವಾಗಿದೆ. ಮೂರು ಪಕ್ಷಗಳ ಬಲದಿಂದಾಗಿ ಕ್ಷೇತ್ರದ ಶಾಸಕರು ಯಾರು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುವುದಿಲ್ಲ. ಕಾರಣ, ಆಯಾ ಪಕ್ಷದ ಅಭ್ಯರ್ಥಿಗೆ ಕೆಲವು ಗೆಲುವಿನ ಲಕ್ಷಣಗಳಿದ್ದರೆ, ಸೋಲಲು ಹಲವು ಕಾರಣಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ರಾಮನಗರ ಕ್ಷೇತ್ರ ಜೆಡಿಎಸ್ ಭದ್ರಕೋಟೆ. ಮಂಡ್ಯದ ಸೋಲಿನ ಅನುಕಂಪ ಇಲ್ಲಿ ವರ್ಕ್ ಔಟ್ ಆಗಬಹುದು. ಜತೆಗೆ ಘೋಷಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳು ವರದಾನವಾಗಬಹುದು. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಪ್ರಬಲ ಪೈಪೋಟಿಯಿಂದಾಗಿ ಜೆಡಿಎಸ್ಗೆ ಹಿನ್ನಡೆಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಬಾರಿ ಸೋತರೂ ಮತ್ತೆ ಜನ ಸೇರಿದ್ದು ಕಾಂಗ್ರೆಸ್ ನ ಘೋಷಿತ ಅಭ್ಯರ್ಥಿ ಇಕ್ಬಾಲ್ ಹುಸೇನ್ ಗೆ ಪ್ಲಸ್ ಪಾಯಿಂಟ್ ಆಗಬಹುದು. ಅಲ್ಲದೇ ಈ ಬಾರಿ ಕಾಂಗ್ರೆಸ್ ಗೆ ಪ್ರತಿಷ್ಠಿತ ಕ್ಷೇತ್ರವಾಗಿದ್ದರಿಂದ ಗೆಲುವು ಅನಿವಾರ್ಯವಾಗಿತ್ತು. . ಆದರೆ, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ, ಕುಮಾರಸ್ವಾಮಿ ವರ್ಚಸ್ಸು ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗಬಹುದು ಎನ್ನಲಾಗುತ್ತಿದೆ.
ಸಚಿವ ಅಶ್ವತ್ಥನಾರಾಯಣ ಅವರ ಕೃಪೆಯಿಂದ ಬಿಜೆಪಿಯ ಗೌತಮ್ ಗೌಡ (ಟಿಕೆಟ್ ಘೋಷಣೆಯಾಗಿಲ್ಲ) ಪ್ಲಸ್ ಪಾಯಿಂಟ್ಸ್ ಸಿಗಬಹುದು. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಸಂಘಟಿತವಾಗಿ ಸಂಘಟಿಸಿದರೆ ಅವರಿಗೆ ನೆರವಾಗಬಹುದು. ಆದರೆ, ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚು ನೆಲೆ ಕಂಡುಕೊಂಡಿಲ್ಲ. ಅವರ ಹಿನ್ನಡೆಗೆ ಪಕ್ಷದ ಆಕಾಂಕ್ಷಿಗಳ ಪಟ್ಟಿಯೇ ಕಾರಣವಿರಬಹುದು ಎಂಬ ಚರ್ಚೆ ನಡೆಯುತ್ತಿದೆ.