ತುಮಕೂರು: ಸಣ್ಣ ಸಣ್ಣ ಸಮುದಾಯಗಳಿಗೆ ರಾಜಕೀಯ ಅವಕಾಶಗಳು ದೊರೆತಾಗ, ಉಳಿದ ಸಮುದಾಯಗಳು ಅವರ ಜೊತೆಗೆ ನಿಂತು, ಗೆಲ್ಲಿಸಿಕೊಂಡು ಬರುವ ಮೂಲಕ ಕರ್ನಾಟಕವನ್ನು ಜಾತ್ಯಾತೀತವಾಗಿ ಬಲಪಡಿಸುವ ಕೆಲಸ ಆಗಬೇಕಿದೆ ಎಂದು ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಓಬಿಸಿ ಘಟಕದ ವತಿಯಿಂದ ಆಯೋಜಿಸಿದ್ದ ಅತಿ ಹಿಂದುಳಿದ ಬುಡಕಟ್ಟು ಸಮುದಾಯಗಳ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡುತಿದ್ದ ಅವರು,ಇಂದಿನ ಜಾತಿ, ಧರ್ಮಗಳ ನಡುವಿನ ಸಂಘರ್ಷ ಕಾಲದಲ್ಲಿ ಬದುಕುವುದೇ ಕಷ್ಟವೆನಿಸಿರುವ ಕಾಲದಲ್ಲಿ, ಕಾಡುಗೊಲ್ಲ ಇನ್ನಿತರ ಬುಡಕಟ್ಟು ಸಮುದಾಯಗಳನ್ನು ಗುರುತಿಸಿ, ಕಾಂಗ್ರೆಸ್ ಪಕ್ಷ ಟಿಕೇಟ್ ನೀಡಿದ್ದು, ಉಳಿದ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳ ಈ ಅವಕಾಶವನ್ನು ಬಳಸಿಕೊಂಡು ಇವರ ಬೆನ್ನಿಗೆ ನಿಂತರೆ, ಮುಂದೊಂದು ದಿನ ಸಾಮಾಜಿಕ ನ್ಯಾಯದ ಅಡಿಯಲ್ಲಿ ನಾವು ಕೂಡ ಅವರಿಂದ ಸಹಾಯ, ಸಹಕಾರ ಪಡೆಯುವ ಹಕ್ಕು ಪಡೆದುಕೊಳ್ಳುತ್ತಾರೆ ಎಂದರು.
ತುಮಕೂರು, ಚಿತ್ರದುರ್ಗ ಸೇರಿದಂತೆ ಮಧ್ಯಕರ್ನಾಟಕದಲ್ಲಿ ವಾಸವಾಗಿರುವ ಕಾಡುಗೊಲ್ಲ ಸಮುದಾಯ ರಾಜ್ಯದಲ್ಲಿ ಸುಮಾರು ೨೦ ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಇಂದಿಗೂ ಈ ಸಮುದಾಯ ಬುಡಕಟ್ಟು ಸಂಸ್ಕೃತಿಯಿಂದ ಹೊರ ಬಂದಿಲ್ಲ. ಇಂತಹ ಒಂದು ಸಮುದಾಯದ ನಿವೃತ್ತ ಇಂಜಿನಿಯರ್ ಜಿ.ಹೆಚ್.ಷಣ್ಮುಖಪ್ಪ ಅವರನ್ನು ಗುರುತಿಸಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಟಿಕೇಟ್ ನೀಡಿದೆ. ಅವರ ಜೊತೆಗೆ ಜಿಲ್ಲೆಯ ೧೧ ಕ್ಷೇತ್ರಗಳಲ್ಲಿ ಅತಿ ಹಿಂದುಳಿದ ವರ್ಗಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಸಾಮಾಜಿಕ ನ್ಯಾಯದ ಕಡೆಗೆ ಮುನ್ನೆಡೆಯುತ್ತಿರುವ ಕಾಂಗ್ರೆಸ್ ಅಧಿಕಾರ ಹಿಡಿಯುವಂತೆ ಮಾಡಿ, ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಡಾ.ಸಿ.ಎಸ್. ದ್ವಾರಕನಾಥ್ ತಿಳಿಸಿದರು.
ಇಂದು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷಕ್ಕೆ ಹಿಂದೂ ರಾಷ್ಟ್ರದ ಅಜೆಂಡಾ ಬಿಟ್ಟು ಬೇರೆ ಗೊತ್ತಿಲ್ಲ. ಅವರ ಮುಂದೆ ದೇಶದ ಅರ್ಥಿಕ ನೀತಿಯಾಗಲಿ, ಕೃಷಿ ನೀತಿಯಾಗಲಿ ಇಲ್ಲ. ನೋಟು ಅಮಾನೀಕರಣಗೊಳಿಸಿ, ನೂರಾರು ಜನರು ಬಿಸಿಲಿನಲ್ಲಿ ನಿಂತು ಸಾಯುವಂತೆ ಮಾಡಿದ ಸರಕಾರಕ್ಕೆ ಯಾವ ಅರ್ಥಿಕ ನೀತಿ ಇದೆ.ಜಿ.ಎಸ್.ಟಿ ಹೆಸರಿನಲ್ಲಿ ಸಾಮಾನ್ಯ ಜನರನ್ನು ಸುಲಿಗೆ ಮಾಡುತ್ತಿದೆ.ತೆರಿಗೆ ಬಾರ ತಾಳಲಾರದೆ ದಿನವೊಂದಕ್ಕೆ ೬೭೫ ಜನ ಸಣ್ಣ ಉದ್ದಿಮೆದಾರರು ದೇಶ ಬಿಟ್ಟು ಬೇರೆಡೆ ನೆಲಸಲು ಹೋಗುತ್ತಿದ್ದಾರೆ. ಗುಜರಾತಿಗಳಿಬ್ಬರು ದೇಶವನ್ನು ಮಾರುತ್ತಿದ್ದರೆ, ಇನ್ನಿಬ್ಬರು ಕೊಳ್ಳುತಿದ್ದಾರೆ. ಎಲ್ಲವೂ ಖಾಸಗೀಕರಣದಿಂದ ಮೀಸಲಾತಿ ಎಂಬುದೇ ಅಪ್ರಸ್ತುತವಾಗುವ ಕಾಲ ದೂರವಿಲ್ಲ.ಹಾಗಾಗಿ ಭವಿಷ್ಯದ ಭಾರತಕ್ಕಾಗಿ ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ ಎಂದು ಡಾ.ಸಿ.ಎಸ್.ದ್ವಾರಕನಾಥ್ ನುಡಿದರು.
ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿಯ ಸದಸ್ಯೆ ಮಿಡ್ಲಡ್ ಡಿಸೋಜ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಶೋಷಿತ ಸಮುದಾಯಗಳನ್ನು ಎಚ್ಚರಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ದಲಿತರು, ಆದಿವಾಸಿಗಳು, ಬುಡಕಟ್ಟು ಸಮುದಾಯಗಳ ಬದುಕು ಕಸಿಯುವ ಇಂತಹ ಹೊತ್ತಿನಲ್ಲಿ ಅವರಿಗೆ ರಾಜಕೀಯ ಪ್ರಜ್ಞೆ ಮೂಡಿಸಿ,ಅವರು ಸಹ ರಾಜಕೀಯ ಪ್ರಾತಿನಿಧ್ಯ ಪಡೆಯುವಂತೆ ಮಾಡುವುದು ಇದರ ಹಿಂದಿನ ಉದ್ದೇಶ ಎಂದರು.
ಕಾಡುಗೊಲ್ಲರ ಆಸ್ಮಿತೆ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಜಿ.ಕೆ.ನಾಗಣ್ಣ ಮಾತನಾಡಿ, ದೇಶದಲ್ಲಿ ಸಾಮಾಜಿಕ ನ್ಯಾಯ ಎನ್ನುವುದು ಮುಂದುವರೆಯಬೇಕೆಂದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ. ಉಳುವವನೇ ಭೂಮಿಯ ಒಡೆಯ, ಜೀತಪದ್ದತಿ ನಿಮೂರ್ಲನೆ ನಿಮೂರ್ಲನೆಯ ಮೂಲಕ ಸಾಮಾಜಿಕ ನ್ಯಾಯದ ಭದ್ರ ಬುನಾಧಿ ಹಾಕಿಕೊಟ್ಟಿದೆ. ಅದನ್ನು ರಾಹುಲ್ಗಾಂಧಿ ಮುಂದುವರೆಸಿಕೊಂಡು ಹೋಗುತಿದ್ದಾರೆ. ಶಿಳ್ಳೆಕ್ಯಾತ, ದೊಂಬಿದಾಸರು ಹೀಗೆ ಎಲ್ಲಾ ಬುಡಕಟ್ಟು ಜನರು ಒಗ್ಗೂಡಿಸುವ ಕೆಲಸವನ್ನು ಡಾ.ಸಿ.ಎಸ್.ದ್ವಾರಕನಾಥ್ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ದಮನಿತರ ಬಗ್ಗೆ ನಿರಂತರ ಹೋರಾಟ ನಡೆಸುತ್ತಿರುವ ಡಾ.ಸಿ.ಎಸ್.ದ್ವಾರಕನಾಥ್ ಅವರು ರಾಜ್ಯದಲ್ಲಿ ಪ್ರವಾಸ ಮಾಡುವ ಮೂಲಕ ಅತಿ ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುತಿದ್ದಾರೆ. ಅಂಬೇಡ್ಕರ್ ಅವರ ಸಮಸಮಾಜದ ಕನಸು ಹೊತ್ತು ದುಡಿಯುತ್ತಿರುವ ಇವರಿಗೆ ಕೈಜೋಡಿಸಿ ನಾವೆಲ್ಲರೂ ಕೆಲಸ ಮಾಡುವ ಮೂಲಕ ಅತಿ ಹಿಂದುಳಿದ ವರ್ಗಗಳು ರಾಜಕೀಯ ಪ್ರಾತಿನಿಧ್ಯವನ್ನು ಪಡೆದುಕೊಳ್ಳಬೇಕಿದೆ ಎಂದರು.
ಸಭೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಹೆಚ್.ಷಣ್ಮುಕಪ್ಪ, ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿಯ ಶಮೀನ್ ಫರ್ಜ್ಹಾನಾ, ಕೇಶವಮೂರ್ತಿ, ಗೋವಿಂದರಾಜು, ಮರಿಚನ್ನಮ್ಮ, ಅನಿಲ್ಕುಮಾರ್, ಸಂಜೀವಕುಮಾರ್, ಗಂಗಾಧರ್, ರಾಜಣ್ಣ, ನಾಗಮಣಿ, ಜಿಲ್ಲಾ ಓಬಿಸಿ ಘಟಕದ ಅಧ್ಯಕ್ಷ ಪುಟ್ಟರಾಜು, ಶ್ರೀನಿವಾಸಕುಮಾರ್, ಸುಜಾತ, ಕೈದಾಳ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.