ಮೂಡುಬಿದಿರೆ: ಕಂಬಳ ಕಾನೂನು ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಬಿದ್ದ ಬಳಿಕ ಮುಂದಿನ ಕಂಬಳದ ನಡೆಯುವ ದಿನಾಂಕದ ನಿಗಧಿಪಡಿಸಲಾಗುವುದು. ಈ ವಾರದಲ್ಲಿ ಕಂಬಳ ಪರ ತೀರ್ಪು ಬಂದರೆ ಪ್ರಥಮ ಕಂಬಳವನ್ನು ಮೂಡುಬಿದಿರೆಯಲ್ಲಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ವೇಣೂರು ಮೀಯಾರು, ಉಪ್ಪಿನಂಗಡಿ, ನಂದಿಕೂರು, ಬಂಗಾಡಿ ಕೊಲ್ಲಿ, ಐಕಳ ಕಂಬಳವನ್ನು ಮಾಡಲು ವ್ಯವಸ್ಥಾಪಕರು ಮುಂದೆ ಬಂದಿದ್ದಾರೆ ಎಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬಾರ್ಕೂರು ಶಾಂತರಾಮ ಶೆಟ್ಟಿ ತಿಳಿಸಿದರು.
ಮೂಡುಬಿದಿರೆಯ ಸಮಾಜಮಂದಿರದಲ್ಲಿ ಭಾನುವಾರ ಸಂಜೆ ನಡೆದ ಕಂಬಳ ಸಮಿತಿಯ ವ್ಯವಸ್ಥಾಪಕರು, ಪದಾಧಿಖಾರಿಗಳು, ಕೋಣಗಳ ಯಜಮಾನರು, ಓಟಗಾರರು ಹಾಗೂ ಕಂಬಳ ಆಸಕ್ತರ ತುರ್ತು ಸಭೆಯನ್ನು ಉದ್ದೇಶುಸು ಮಾತನಾಡಿದರು. ನೀರಿನ ಲಭ್ಯತೆ ಪರಿಗಣಿಸಿ ಎಲ್ಲೆಲ್ಲಿ ಕಂಬಳವನ್ನು ಆಯೋಜಿಸಬಹುದೆಂದು ನಿರ್ಣಯ ತೆಗೆದುಕೊಳ್ಳಲಾಗುವುದು. ಲೇಸರ್ ಹಾಗೂ ತಂತ್ರಜ್ಞಾನಗಳನ್ನು ಕೂಡ ಸಮರ್ಪಕವಾಗಿ ಬಳಸಲಾಗುವುದು.
ಕಂಬಳದ ಉಳಿವಿನ ದೃಷ್ಠಿಯಿಂದ ಶಿಸ್ತುಬದ್ಧವಾಗಿ, ಕೋಣಗಳಿಗೆ ಹಿಂಸೆ ನೀಡದೆ ಆಯೋಜಿಸುವಂತಾಗಬೇಕು.ಗಂತು, ಮಂಜೊಟ್ಟಿ ಹಾಗೂ ಹೊರ ಭಾಗದಲ್ಲಿ ಕೋಣಗಳಿಗೆ ಹೊಡೆಯಬಾರದೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ವಿನಂತಿಸಿದರು. ವಿಧೇಯಕದಿಂದ ಎನ್ನುವ .`ಬುಲ್’ ಶಬ್ದ ತೆಗೆಯಬೇಕು.ಇಲ್ಲವಾದಲ್ಲಿ ಪೇಟಾದವರು ಮತ್ತೆ ಕೋರ್ಟ್ ಗೆ ಹೋಗುವ ಸಂಭವವಿದೆ ಎನ್ನುವುದರ ಬಗ್ಗೆ ಚರ್ಚೆ ನಡೆಯಿತು. ಉಭಯ ಸದನಗಳಲ್ಲಿ ವಿಧೇಯಕಕ್ಕೆ ಪೂರಕವಾಗಿ ಅವಕಾಶ ಕಲ್ಪಿಸಿದ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಅವಿಭಜಿತ ದ.ಕ ಜಿಲ್ಲಾ ಕಂಬಳ ಸಮಿತಿಯ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಕೋಶಾಧಿಕಾರಿ ಪಿ.ಆರ್ ಶೆಟ್ಟಿ, ಉಪಾಧ್ಯಕ್ಷ ಕೇಶವ ಭಂಡಾರಿ, ಬೈಂದೂರು ವಲಯದ ಸಾಂಪ್ರದಾಯಿಕ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.