ಬೆಳ್ತಂಗಡಿ: ಗೋಕಳ್ಳತನ, ಅಕ್ರಮ ಗೋಸಾಗಾಟದ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹರೀಶ ಪೂಂಜಾ ಅವರು ರಾಜ್ಯ ಪೋಲಿಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವ್ಯಾವಹತವಾಗಿ ಗೋಕಳ್ಳತನ, ಅಕ್ರಮ ಗೋಸಾಗಾಟ ಹೆಚ್ಚುತ್ತಿದೆ. ಮೇಯಲು ಬಿಟ್ಟ ಗೋವುಗಳನ್ನು ಕಳ್ಳತನ ಮಾಡುತ್ತಿದ್ದ ಗೋಕಳ್ಳರು ಈಗ ಬಡರೈತರ ಕೊಟ್ಟಿಗೆಗೆ ನುಗ್ಗಿ, ತಲವಾರು ಬೀಸಿ ಗೋವುಗಳನ್ನು ಅಪಹರಿಸುತ್ತಿದ್ದಾರೆ. ಇದನ್ನು ತಡೆಯಲು ಜಿಲ್ಲಾಡಳಿತ ವಿಫಲವಾಗುತ್ತಿದೆ. ಚಾರ್ಮಾಡಿಯಲ್ಲಿ ಅಪಘಾತಕ್ಕೀಡಾದ ವಾಹನವೊಂದರಲ್ಲಿ ಕರುಣಾಜನಕ ಸ್ಥಿತಿಯಲ್ಲಿ ಪತ್ತೆಯಾದ ಗೋವುಗಳ ಪ್ರಸ್ತುತ ಪರಿಸ್ಥಿತಿಗೆ ಕೈಗನ್ನಡಿಯಾಗಿದೆ. ಸಾರ್ವಜನಿಕರು ಗೋಕಳ್ಳತನ ತಡೆಯುವ ಪ್ರಯತ್ನ ಮಾಡಿದಾಗ ಅವರ ಮೇಲೆ ಕೇಸ್ ದಾಖಲಾಗಿದೆಯೇ ಹೊರತಾಗಿ ಅಕ್ರಮ ಗೋಸಾಗಾಟ ನಿಲ್ಲಿಸುವ ಯಾವ ಪ್ರಯತ್ನವೂ ನಡೆದಿಲ್ಲ. ನಾಲ್ಕು ದಿನದ ಹಿಂದೆ ಗೋಕಳ್ಳರನ್ನು ಹಿಡಿದ ಪೊಲೀಸರ ಮುಂದೆ ಪಟಾಕಿ ಸಿಡಿಸಿ ಗೋವುಗಳನ್ನು ಸಾಗಿಸಿ ಪೊಲೀಸರಿಗೆ ಸವಾಲೆಸೆದ ಘಟನೆಯು ನಡೆದಿದೆ.
ಇದೇ ರೀತಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕದಡುವ ಸಾಧ್ಯತೆ ಇದೆ. ಈ ಕುರಿತಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್ ರಾಜು ಅವರನ್ನು ಭೇಟಿಯಾಗಿ ಗೋಕಳ್ಳತನ, ಅಕ್ರಮ ಗೋಸಾಗಾಟದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹರೀಶ್ ಪೂಂಜಾ ಆಗ್ರಹಿಸಿದರು.