ಬೆಳ್ತಂಗಡಿ: ಯಕ್ಷಗಾನ ಮೇಳದಿಂದ ಕಲಾವಿದರಿಗೆ ಶಕ್ತಿ ಸಿಗುತ್ತದೆಯಲ್ಲದೆ, ಕಲೆಯ ಪ್ರಸಾರವೂ ಆಗುತ್ತದೆ. ನಾಳ ದೇವಸ್ಥಾನದಲ್ಲಿ ಇದು ಐತಿಹಾಸಿಕ ಕ್ಷಣ ಎಂದು ಶಾಸಕ ಹರೀಶ ಪೂಂಜ ಹೇಳಿದರು.
ಗೇರುಕಟ್ಟೆ ಸನಿಹದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಶನಿವಾರ ರಾತ್ರಿ ನಡೆದ ಪ್ರಾರಂಭೋತ್ಸವದಲ್ಲಿ ಅವರು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾಳ ಕ್ಷೇತ್ರದಲ್ಲಿ ಅನ್ನದಾನ ಈಗಾಗಲೇ ನಡೆಯುತ್ತಿದೆ. ಇದೀಗ ಗಜ್ಜೆ ಸೇವೆಯೂ ಇಂದಿನಿಂದ ಆರಂಭವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲೀಗ ಧರ್ಮಸ್ಥಳ ಹಾಗೂ ನಾಳದಲ್ಲಿ ಎರಡು ಮೇಳಗಳು ಇವೆ ಎಂಬ ಹೆಮ್ಮೆ ನಮ್ಮೆಲ್ಲರದ್ದಾಗಿದೆ. ಮೇಳವನ್ನು ಹೊರಡಿಸುವುದು ಅಷ್ಟು ಸುಲಭವಲ್ಲ. ಆದರೂ ಕಲಾರಾಧನೆಯ ಬದ್ಧತೆಯಿಂದಾಗಿ ಇಲ್ಲಿನ ರಾಘವೇಂದ್ರ ಅಸ್ರಣ್ಣರು ದೇವಿಯ ಸೇವೆಗೆ ಕಟಿಬದ್ದರಾಗಿದ್ದಾರೆ. ಇವರ ಪ್ರಯತ್ನಕ್ಕೆ ನಾವೆಲ್ಲರೂ ಸೇವೆ ಆಟಗಳನ್ನು ಆಡಿಸುವುದರ ಮೂಲ ನಮ್ಮ ಸೇವೆಯನ್ನು ನೀಡಬೇಕಾಗಿದೆ ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ತಾನು ಸುಮಾರು ಆರು ವರ್ಷಗಳ ಕಾಲ ಯಕ್ಷಗಾನದ ವಿದ್ಯಾರ್ಥಿಯಾಗಿದ್ದುದನ್ನು ನೆನಪಿಸಿಕೊಂಡ ಶಾಸಕರು, ನಾಳದಲ್ಲಿ ಮೊದಲ ಸೇವೆ ಆಟ ಆಡಿಸುವ ಭಾಗ್ಯ ದೊರಕಿರುವುದಕ್ಕೆ ಸಂತಸಪಟ್ಟರು.
ವೇ.ಮೂ. ರಾಮದಾಸ ಅಸ್ರಣ್ಣ ಖಂಡಿಗ ಅವರು, ಮೌಲಿಕತೆಯನ್ನು ಅಳವಡಿಸಿಕೊಳ್ಳಲು, ಜ್ಞಾನದ ಪ್ರಸಾರಕ್ಕೆ ಯಕ್ಷಗಾನದ ಕೊಡುಗೆ ಅಪಾರ. ನಮ್ಮ ಹಿರಿಯರಿಗೆ ಪೌರಾಣಿಕ ಕಥಾನಕಗಳ ಪರಿಚಯ ಆದದ್ದೇ ಯಕ್ಷಗಾನದಿಂದ ಎಂದರು.
ಅಧ್ಯಕ್ಷತೆಯನ್ನು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ವರ ಜಿ. ವಹಿಸಿದ್ದರು.
ವೇದಿಕೆಯಲ್ಲಿ ಸುಳ್ಯ ಸ್ವಾತಿ ಲಾಡ್ಜ್ ಮಾಲಕ ಕೃಷ್ಣ ಸೋಮಯಾಜಿ, ಹಿರಿಯ ಕಲಾವಿದ ಗೋವಿಂದ ಭಟ್, ಹಿರಿಯ ಯಕ್ಷಗಾನ ಪ್ರೋತಾಹಕ ಧರ್ಮಸ್ಥಳ ಬಿ. ಭುಜಬಲಿ, ಕಳಿಯ ಗ್ರಾ.ಪಂ. ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ, ಕಳಿಯ ಕೃ.ಪ.ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಉದ್ಯಮಿ ಹೇಮಂತ ಕುಮಾರ್ ಗೇರುಕಟ್ಟೆ, ದೇವರಾಜ ಶೆಟ್ಟಿ ಮದ್ವ ಸುರತ್ಕಲ್, ಕಳಿಯ ಗ್ರಾ.ಪಂ. ಮಾಜಿ ಸದಸ್ಯ ಜನಾರ್ದನ ಪೂಜಾರಿ ಉಪಸ್ಥಿತರಿದ್ದರು.
ಹಿರಿಯ ಕಲಾವಿದ ಕೇಶವ ಶಕ್ತಿನಗರ ಇವರನ್ನು ಸಮ್ಮಾನಿಸಲಾಯಿತು.
ಮೇಳದ ಪ್ರಧಾನ ವ್ಯವಸ್ಥಾಪಕ ಹಾಗೂ ಕ್ಷೇತ್ರದ ಅರ್ಚಕ ವೇ.ಮೂ. ರಾಘವೇಂದ್ರ ಅಸ್ರಣ್ಣ ಸ್ವಾಗತಿಸಿದರು. ಪ್ರಬಂಧಕ ರಾಘವ ಹೆಚ್ ವಂದಿಸಿದರು. ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರ್ವಹಿಸಿದರು.ಬೆಳಿಗ್ಗೆ ವೇ.ಮೂ.ಬಾಲಕೃಷ್ಣ ಪಾಂಗಣ್ಣಾಯ ಗಣಹೋಮ ನೆರವೇರಿಸಿದರು. ಸಂಜೆ ಗೆಜ್ಜೆ ಮುಹೂರ್ತ ಮಾಡಲಾಯಿತು. ಬಳಿಕ ಕ್ಷೇತ್ರದ ರಥ ಬೀದಿಯಲ್ಲಿ ಪಾಂಡವಾಶ್ವಮೇಧ ಎಂಬ ಪ್ರಥಮ ಸೇವಾ ಬಯಲಾಟ ನಡೆಯಿತು.
ಈ ಮೇಳವು ಬಯಲಾಟ ಮೇಳವಾಗಿದ್ದು ಎಲ್ಲಾ ಪೌರಾಣಿಕ ಪ್ರಸಂಗಗಳನ್ನು, ಐತಿಹಾಸಿಕ ಪ್ರಸಂಗಗಳನ್ನು ಹಾಗೂ ಕಾಲ್ಪನಿಕ ಪ್ರಸಂಗಗಳನ್ನು ಆಡಿ ತೊರಿಸಲಿದೆ. ಹಿತ ಮಿತವಾದ ವೀಳ್ಯದ ಜೊತೆಗೆ ಉತ್ತಮ ಪ್ರದರ್ಶನ ನೀಡಲು ಬದ್ಧರಿದ್ದಾರೆ. ಅನುಭವಿ ಕಲಾವಿದರು ಮೇಳದಲ್ಲಿದ್ದು ಸ್ಥಳೀಯ ಕಲಾವಿದರು ಕೂಡ ಮೇಳದಲ್ಲಿದ್ದಾರೆ.
ಭಾಗವತರಾಗಿ ಮೋಹನ ಕಲಂಬಾಡಿ, ಸ್ವರ ಸಿಂಧೂರಿ ಅಮೃತ ಅಡಿಗ, ನಿರಂಜನ ಬೆಳ್ಳೂರು, ಚೆಂಡೆ ಮದ್ದಳೆಯಲ್ಲಿ ಆನಂದ ಗುಡಿಗಾರ್ ಕೆರ್ವಾಶೆ, ಚಂದ್ರಶೇಖರ ಭಟ್ ಕೊಂಕಣಾಜೆ, ನವೀನಚಂದ್ರ ಮೊಗರ್ನಾಡು, ಸಂಗೀತದಲ್ಲಿ ಮುರಾರಿ ಪಂಜಿಗದ್ದೆ, ಹಾಸ್ಯದಲ್ಲಿ ರಘುನಾಥ ರೈ ಅಂಕತಡ್ಕ, ರವಿಭಂಡಾರಿ ಪೆರ್ಣ, ಸ್ತ್ರೀ ಪಾತ್ರದಲ್ಲಿ ಸೀತರಾಮ ಕಜೆಕೋಡಿ, ರವಿಚಂದ್ರ ಚೆಂಬು, ಸೂರ್ಯ ಶೆಟ್ಟಿ ಮಲ್ನಾಡ್, ಕಲಾವಿದರಾಗಿ ಪುಷ್ಪರಾಜ ಜೋಗಿ, ರಾಘವ ಹೆಚ್ ಗೇರುಕಟ್ಟೆ, ರಾಘವೇಂದ್ರ ಕಾರ್ಕಳ, ದಿನೇಶ್ ಬಂಟ್ವಾಳ, ರಾಘವೇಂದ್ರ ಅಸ್ರಣ್ಣ, ಶೇಖರ ಮಣಿಯಾಣಿ ಸುಳ್ಯ, ಮೋಹನ ಕವತ್ತಾರು, ಪ್ರದೀಪ್ ಬೆಳ್ಳಾರೆ, ಗೋಪಾಲ ರೈ ಬೆಳ್ಳಾರೆ, ಉಮೇಶ ವಳಕಡಮ, ಜಗದೀಶ ಸರಪಾಡಿ, ಕೃಷ್ಣಾನಂದ ಕುಡ್ವ, ಅತಿಥಿ ಕಲಾವಿದರಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಸತೀಶ್ ಪುಣಿಚಿತ್ತಾಯ, ಕುಮಾರ ಸುಬ್ರಹ್ಮಣ್ಯ ಭಟ್ ವಳಕುಂಜ ಮೊದಲಾದವರು ರಂಗವನ್ನು ಸಾಕ್ಷಾತ್ಕರಿಸಲಿದ್ದಾರೆ.