ಮಂಗಳೂರು: ದಕ್ಷಿಣ ಕನ್ನಡದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಯುಎಪಿಎ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರೆ, ಮಸೂದ್ ಮತ್ತು ಫಾಜಿಲ್ ಕೊಲೆ ಪ್ರಕರಣವನ್ನು ನಿರ್ಲಕ್ಷಿಸಲಾಗಿದೆ. ಎನ್ಐಎಗೂ ತನಿಖೆ ಹಸ್ತಾಂತರಿಸಿಲ್ಲ. ಇದನ್ನು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆ ತಿಳಿಸಿದೆ. ಸರಕಾರದ ದ್ವಂದ ನಿಲುವನ್ನು ಖಂಡಿಸಿ ಸೆಪ್ಟೆಂಬರ್ 9ರಂದು ಮಧ್ಯಾಹ್ನ ಮೂರು ಗಂಟೆಗೆ ಸಮಾನ ಮನಸ್ಕ ಸಂಘಟನೆಗಳ ಸಹಕಾರದಲ್ಲಿ ಸುರತ್ಕಲ್ ಜಂಕ್ಷನ್ನಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ.
ಸುರತ್ಕಲ್ನಲ್ಲಿ ನಡೆದಿರುವ ಫಾಜಿಲ್ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ತಾರತಮ್ಯ ಎಸಗಿದ್ದು, ಈ ಬಗ್ಗೆ ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಬರಲಿರುವ ಪ್ರಧಾನಿಗೆ ಅಹವಾಲು ಸಲ್ಲಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಬೇಕು ಎಂದು ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆಯ ಕಾನೂನು ಸಲಹೆಗಾರ ಉಮರ್ ಫಾರೂಕ್ ಮನವಿ ಮಾಡಿದರು.
ಹತ್ಯೆಗೀಡಾಗಿದ್ದ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸರಕಾರ ಪರಿಹಾರ ನೀಡಿದೆ. ಆದರೆ ಮಸೂದ್ ಮತ್ತು ಫಾಜಿಲ್ ಕುಟುಂಬಕ್ಕೆ ನೀಡಿಲ್ಲ. ಸಿಎಂ ಮತ್ತು ಗೃಹ ಸಚಿವರು ಮಸೂದ್, ಫಾಜಿಲ್ ಮನೆಗೆ ಭೇಟಿ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರೂ, ಅದನ್ನು ಈಡೇರಿಸದೆ ಅನ್ಯಾಯ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಯುಎಪಿಎ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರೆ, ಮಸೂದ್ ಮತ್ತು ಫಾಜಿಲ್ ಕೊಲೆ ಪ್ರಕರಣವನ್ನು ನಿರ್ಲಕ್ಷಿಸಲಾಗಿದೆ. ಎನ್ಐಎಗೂ ತನಿಖೆ ಹಸ್ತಾಂತರಿಸಿಲ್ಲ. ಇದನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದರು.
ಐಕ್ಯತಾ ವೇದಿಕೆ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಬದ್ರಿಯಾ, ಉಪಾಧ್ಯಕ್ಷ ಅಬ್ದುಲ್ ಜಲೀಲ್ ಅದ್ದು, ಕಾರ್ಯದರ್ಶಿ ಕೆ. ಶರೀಫ್, ಹಸನಬ್ಬ ಬಾಳ, ಅಬೂಬಕರ್ ಕುಳಾಯಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಫಾಜಿಲ್ ಹತ್ಯೆಯ ಹಿಂದಿನ ವಾಸ್ತವಾಂಶ ಪೊಲೀಸರಿಗೆ ತಿಳಿದಿದ್ದರೂ, ರಾಜಕೀಯ ಹಸ್ತಕ್ಷೇಪವು ತನಿಖೆಗೆ ಅಡ್ಡಿಯಾಗಿದೆ. ಆ ಮೂಲಕ ತನಿಖೆ ಸಂಪೂರ್ಣ ಹಾದಿ ತಪ್ಪಿದೆ ಎಂದು ಫಾಜಿಲ್ನ ತಂದೆ ಫಾರೂಕ್ ಆರೋಪಿಸಿದರು.
ಸಿಸಿಟಿವಿ ಫೂಟೇಜ್ ಆಧರಿಸಿ ಆರೋಪಿಗಳನ್ನು ಬಂಧಿಸಿರುವುದು ಬಿಟ್ಟರೆ, ಬೇರೇನೂ ತನಿಖೆ ನಡೆದಿಲ್ಲ. ಘಟನೆಯ ಸೂತ್ರಧಾರರನ್ನು ಬಹಿರಂಗಪಡಿಸಿಲ್ಲ. ಸಾಕ್ಷಿದಾರರ ಹೇಳಿಕೆಯನ್ನೂ ಪಡೆದಿಲ್ಲ. ಸೂತ್ರಧಾರರನ್ನು ಕೈ ಬಿಟ್ಟರೆ ಮುಂದೆ ಅಪಾಯವಿದೆ. ನಿಷ್ಪಕ್ಷ ತನಿಖೆ ನಡೆಸಿ, ನೈಜ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.