ಬಂಟ್ವಾಳ: ದೂರವಾಣಿ ಕೇಬಲ್ ಕಳವುಗೈಯಲು ಬಂದ ಇಬ್ಬರನ್ನು ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಹಿಡಿದು ವಿಟ್ಲ ಠಾಣಾ ಪೊಲೀಸರಿಗೆ ವಶಕ್ಕೆ ಒಪ್ಪಿಸಿದ ಘಟನೆ ಕೊಳ್ನಾಡು ಗ್ರಾಮದ ಕುದ್ರಿಯ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಪುಣಚ ನಿವಾಸಿ ಸೇಸಪ್ಪ ಹಾಗೂ ಅವರೊಂದಿಗೆ ಬಂದಿದ್ದ ವ್ಯಕ್ತಿಯೋರ್ವರು ಕುದ್ರಿಯಾ ಸಮೀಪ ಕೇಬಲ್ ಕದಿಯುತ್ತಿದ್ದ ವೇಳೆ ನಾಗರಿಕರ ಕೈಗೆ ಸಿಕ್ಕಿ ಬಿದ್ದಿದ್ದರೆನ್ನಲಾಗಿದೆ. ಆ ಬಳಿಕ ಅವರಿಬ್ಬರನ್ನು ಸಾರ್ವಜನಿಕರು ವಿಟ್ಲ ಠಾಣಾ ಪೊಲೀಸರಿಗೊಪ್ಪಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ. ಸೇಸಪ್ಪರವರು ಈ ಹಿಂದೆ ದಿನಗೂಲಿ ನೆಲೆಯಲ್ಲಿ ಬಿಎಸ್ಎನ್ಎಲ್ ನಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಕೆಲ ಸಮಯಗಳ ಹಿಂದೆ ಅವರನ್ನು ಕೆಲಸದಿಂದ ಬಿಟ್ಟಿದ್ದರೆನ್ನಲಾಗಿದೆ.
ಇದೀಗ ಇಬ್ಬರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಿಎಸ್ ಎನ್ ಎಲ್ ಸಂಸ್ಥೆಯ ದೂರವಾಣಿ ಕೇಬಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಸಾರ್ವಜನಿಕರು ಹಿಡಿದು ನಮಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವಿಟ್ಲ ಠಾಣಾ ಪೊಲೀಸರು ತಿಳಿಸಿದ್ದಾರೆ.